ಬೆಂಗಳೂರು: ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಸ್ಥಾಪನೆಯಾಗಿರುವ ಫುಡ್ ಪಾರ್ಕ್ಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸುಮಾರು 1 ಲಕ್ಷ ಕೋಟಿ ರೂ.ಗಳ ಮಾಲ್ಯದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡ್ನೊಂದಿಗೆ ಮಾರುಕಟ್ಟೆ ಕಲ್ಪಿಸುವ ಕಾರ್ಯವನ್ನು ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಸಾಧಿಸಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್ ಒದಗಿಸುವ ಕುರಿತು ಆಯೋಜಿಸಿಲಾಗಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ರಾಜ್ಯದ ಹಿರಿಯೂರು, ಬಾಗಲಕೋಟ, ಜೇವರ್ಗಿ ಹಾಗೂ ಮಾಲೂರು ತಾಲೂಕುಗಳಲ್ಲಿರುವ ಫುಡ್ ಪಾರ್ಕ್ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆದ್ಯತೆ ನೀಡಬೇಕು. 31 ಜಿಲ್ಲೆಗಳ ಬೆಳೆಗಳು, ಅಗತ್ಯ ಇರುವ ತಂತ್ರಜ್ಞಾನ ಆಧರಿಸಿ ಈ ಫುಡ್ ಪಾರ್ಕ್ಗಳ ವ್ಯಾಪ್ತಿಯಡಿ ವಿಂಗಡಿಸಬೇಕು.
ತ್ವರಿತವಾಗಿ ಹಾಳಾಗುವ ಕೃಷಿ,ತೋಟಗಾರಿಕೆ ಉತ್ಪನ್ನಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಚಟುವಟಿಕೆಗಳಲ್ಲಿ ರೈತರನ್ನು ತೊಡಗಿಸಬೇಕು. ರಫ್ತು ಚಟುವಟಿಕೆಗಳನ್ನು ಉತ್ತೇಜಿಸಿ, ಉದ್ಯೋಗ ಸೃಜನೆ, ರೈತರ ಆದಾಯ ಹೆಚ್ಚಳಕ್ಕೆ ಸಮಗ್ರ ರೂಪುರೇಷೆಗಳನ್ನು ಹಾಕಿಕೊಂಡು ಸರಳವಾಗಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆ ಹಾಗೂ ತಾಲೂಕುಗಳಲ್ಲಿರುವ ರಾಜ್ಯ ಉಗ್ರಾಣ ನಿಗಮದ ಗೋದಾಮುಗಳನ್ನು ಫುಡ್ ಪಾರ್ಕ್ಗಳೊಂದಿಗೆ ಮ್ಯಾಪಿಂಗ್ ಮಾಡಿ ಕೃಷಿ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಮಾರುಕಟ್ಟೆ ಕಲ್ಪಿಸಲು ಪೂರಕ ಕಾರ್ಯ ಕೈಗೊಳ್ಳಬೇಕು. ರೈತ ಉತ್ಪಾದಕ ಸಂಸ್ಥೆಗಳು, ಸ್ವ ಸಹಾಯ ಸಂಘಗಳ ಸದಸ್ಯರನ್ನು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವರ ಕೌಶಲ್ಯ ಹೆಚ್ಚಿಸಬೇಕು. ಬ್ಯಾಂಕುಗಳು, ಉದ್ಯಮಿಗಳ ನಡುವೆ ಸಮನ್ವಯ ಸಾಧಿಸಬೇಕು.
ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಕೃಷಿಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ಸಮಯದಲ್ಲಿ ಕೃಷಿಕರ ಮಕ್ಕಳ ಹೊಸ ಪೀಳಿಗೆಗೆ ಕೃಷಿ ಯಂತ್ರೋಪಕರಣಗಳ ಬಳಕೆ, ಸುಸ್ಥಿರ ಕೃಷಿ, ವೈವಿಧ್ಯತೆಯ ಉಪಕಸುಬುಗಳ ತರಬೇತಿ ನೀಡಿ, ಕೌಶಲ್ಯ ಹೆಚ್ಚಿಸಿ ಜೀವನ ಮಟ್ಟ ಸುಧಾರಣೆಗೆ ವಿಶಾಲ ತಳಹದಿಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದಕ್ಕಾಗಿ ಜಿಲ್ಲೆ, ತಾಲೂಕು ಹಾಗೂ ಗ್ರಾ.ಪಂ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕು ಎಂದು ಡಾ.ಶಾಲಿನಿ ರಜನೀಶ್ ಸೂಚಿಸಿದರು.
ಕೃಷಿ ಇಲಾಖೆಯ ಕಾರ್ಯದರ್ಶಿ ವಿ.ಅನ್ಬುಕುಮಾರ್ ಮಾತನಾಡಿ, ರಾಜ್ಯದ ಕೃಷಿ , ತೋಟಗಾರಿಕೆ, ಪಶುಸಂಗೋಪನಾ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಾಕಷ್ಟು ಸೌಕರ್ಯಗಳಿವೆ. ಅಲ್ಲಿನ ತಜ್ಞರು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆಹಾರ ಯೋಜನೆಗಳ ತಯಾರಿಕೆ, ಮಾರುಕಟ್ಟೆ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.
ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಕೃಷಿ, ನಬಾರ್ಡ್ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಸ್ವಂತ ಪ್ರಯೋಗದ ಮೂಲಕ ಮೂರು ಇಂಚಿನ ದ್ರಾಕ್ಷಿ ಬೆಳೆದ ರೈತ; ವಿದೇಶದಿಂದ ಭಾರಿ ಬೇಡಿಕೆ