ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಾಳೆಯಿಂದ ಎರಡು ದಿನ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರಕಾರ್ಯ ನಡೆಸಲಿದ್ದಾರೆ.
ಜೆಡಿಎಸ್ ಶಾಸಕರಾಗಿದ್ದ ಬಿ. ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಮಾಜಿ ಸಚಿವ ಟಿ ಬಿ ಜಯಚಂದ್ರ ಕಣಕ್ಕಿಳಿದಿದ್ದು ಅವರ ಪರವಾಗಿ ಎರಡು ದಿನ ಡಿಕೆಶಿ ಪ್ರಚಾರ ನಡೆಸಲಿದ್ದಾರೆ.
ನಾಳೆ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಡುವ ಅವರು ಬುಧವಾರ ರಾತ್ರಿ 10.30ಕ್ಕೆ ವಾಪಸಾಗಲಿದ್ದಾರೆ. ನಾಳೆ ಬೆಳಗ್ಗೆ 11ರಿಂದ ಸಂಜೆ 5.30 ರವರೆಗೆ ನಿರಂತರವಾಗಿ ಪ್ರಚಾರ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದಾಗಿದ್ದು, ಶಿರಾ ಹಾಗೂ ರಾಜರಾಜೇಶ್ವರಿ ನಗರ ಎರಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅವರು ಕಠಿಣ ಪರಿಶ್ರಮದಲ್ಲಿದ್ದಾರೆ.
ನಾಳೆ ಬೆಳಗ್ಗೆ ಇಂದ ಅವರು ಸಂಜೆಯವರೆಗೆ ಯತ್ತಪ್ಪನಹಟ್ಟಿ, ದೊಡ್ಡ ಆಲದಮರ, ಬ್ರಹ್ಮಸಂದ್ರ, ಚನ್ನೇನಹಳ್ಳಿ, ತರೂರು, ಭೂಪಸಂದ್ರ, ತಾಳಗುಂದ, ಚಿಕ್ಕನಹಳ್ಳಿ, ಕಳ್ಳಂಬೆಳ್ಳ, ಯಲದಬಾಗಿ, ಹಾಲ್ದೊಡ್ಡೇರಿ ಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಳೆ ತುಮಕೂರಿನಲ್ಲಿ ವಾಸ್ತವ್ಯ ಹೂಡಲಿರುವ ಅವರು, ಬುಧವಾರ ಬೆಳಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಪ್ರಚಾರ ನಡೆಸಿ ರಾತ್ರಿ ಬೆಂಗಳೂರು ತಲುಪಲಿದ್ದಾರೆ.
ಬುಧವಾರ ಅವರು ಉಗಣಕಟ್ಟೆ, ಪಟ್ಟನಾಯಕನಹಳ್ಳಿ, ಯಾದಲಡಕು, ಕ್ಯಾದಿಗುಂಟೆ, ಹುಲಿಕುಂಟೆ, ತಡಕಲೂರು, ಬಿಜ್ಜಹಳ್ಳಿ, ಚಿರಹಳ್ಳಿ, ಲಕ್ಕನಹಳ್ಳಿ, ದೊಡ್ಡ ಬಾಣಗೆರೆ, ಹಂದಿಕುಂಟೆ, ಗೋಣಿಹಳ್ಳಿ, ಮದಲೂರು, ಕೊಟ್ಟ, ಶಿರಾದಲ್ಲಿ ಪ್ರಚಾರ ನಡೆಸಲಿದ್ದಾರೆ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಿದ್ದರೆ, ಶಿರಾ ಕ್ಷೇತ್ರದಲ್ಲಿ ಕುಂಚಿಟಿಗ ಮತಗಳು ಹೆಚ್ಚಿರುವುದರಿಂದ ಇವರ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದ್ದು, ಅತ್ಯಂತ ಪ್ರಮುಖವಾಗಿ ಸಮುದಾಯದವರು ಹೆಚ್ಚಿರುವ ಭಾಗಗಳಲ್ಲಿಯೇ ಎರಡು ದಿನ ಡಿಕೆಶಿ ಸಂಚರಿಸಿ ಪ್ರಚಾರ ನಡೆಸಲಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಟಿಬಿ ಜಯಚಂದ್ರ ಜೊತೆ ಹಲವು ಕಾಂಗ್ರೆಸ್ ನಾಯಕರು ಈಗಾಗಲೇ ತುರುಸಿನ ಪ್ರಚಾರ ಕಾರ್ಯ ನಡೆಸಿದ್ದು, ಇದೀಗ ಡಿಕೆ ಶಿವಕುಮಾರ್ ಕೂಡ ತೆರಳುವ ಮೂಲಕ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತುಂಬಲಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಪ್ರಚಾರಕ್ಕಾಗಿ ಶಿರಾಗೆ ತೆರಳಲಿದ್ದಾರೆ.