ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಇಂದು ಬೃಹತ್ ಪ್ರತಿಭಟನೆಯನ್ನು ಒಕ್ಕಲಿಗರ ಸಂಘಟನೆ ಹಮ್ಮಿಕೊಂಡಿದೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆ ಹಿನ್ನೆಲೆ ಎಲ್ಲೆಡೆ ಖಾಕಿ ಕಣ್ಗಾವಲು ಇಡಲಾಗಿದೆ. ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಷನಲ್ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ನಡೆಸಿ ನಂತ್ರ ರಾಜ್ಯಪಾಲರಿಗೆ ಮನವಿ ಯನ್ನ ಸಲ್ಲಿಸಲಿದ್ದಾರೆ.
ಪ್ರತಿಭಟನೆಯಲ್ಲಿ ರಾಜಕೀಯ ಪಕ್ಷದ ಮುಖಂಡರು, ಸ್ವಾಮೀಜಿಗಳು, ಕರವೇ ಅಧ್ಯಕ್ಷರು, ರಾಮನಗರ ಮಂಡ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಒಕ್ಕಲಿಗ ಸಮುದಾಯದ ಜನರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.
ಪ್ರತಿಭಟನೆಗೆ ಒಟ್ಟು 35,000 ಜನರು ಬರಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭದ್ರತೆಗಾಗಿ 50 ಕೆಎಸ್ಆರ್ಪಿ, 40 ಸಿ ಎ ಆರ್ ತುಕಡಿ, ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, 11 ಡಿಸಿಪಿ, 42 ಎಸಿಪಿ, 106 ಇನ್ಸ್ಪೆಕ್ಟರ್, 373 ಎಸ್ ಐ,374 ಎ ಎಸ್ ಐ, 2280 ಮುಖ್ಯಪೇದೆ, 500 ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪ್ರತಿಭಟನಾಕಾರರ ಪ್ರತಿಯೊಂದು ಚಲನವಲನ ಗಮನಿಸಲಾಗುತ್ತಿದೆ. ಅಲ್ಲದೆ, ಅವರು ಬಂದ ವಾಹನದ ನಂಬರ್ ಪ್ಲೇಟ್ ಸಹ ತೆಗೆದುಕೊಳ್ಳಲಾಗುತ್ತದೆ.
ಮತ್ತೊಂದೆಡೆ ಕಾರ್ಯಕರ್ತರು ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗೆ ಏನಾದರೂ ತೊಂದರೆ ಮಾಡಿದರೆ ಅಂತವರನ್ನು ತಕ್ಷಣ ಬಂಧಿಸಸಲಾಗುವುದು ಎಂದು ನಗರ ಪೊಲೀಸರು ಸೂಚನೆ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಏನಾದರೂ ಅಹಿತಕರ ಘಟನೆಗಳು ನಡೆದರೆ ಪ್ರತಿಭಟನೆ ನಡೆಸಲು ಪ್ಲಾನ್ ಮಾಡಿದ ಆಯೋಜಕರೇ ನೇರ ಹೊಣೆ ಎಂದು ತಿಳಿಸಿದ್ದಾರೆ.
ರ್ಯಾಲಿ ಬೆಳಗ್ಗೆ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟು, ಸಜ್ಜನ್ರಾವ್ ವೃತ್ತ, ಮಿನರ್ವವೃತ್ತ, ಜೆ.ಸಿ. ರಸ್ತೆ, ಪುರಭವನ, ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ ಮೂಲಕ ಸಾಗಿ ಸ್ವತಂತ್ರ್ಯ ಉದ್ಯಾನ ತಲುಪಲಿದೆ. ಈ ಸಂದರ್ಭ ಬಸವನಗುಡಿ, ಆರ್.ವಿ. ರಸ್ತೆ, ಕೆ.ಆರ್. ಮಾರುಕಟ್ಟೆ, ಜೆ.ಸಿ. ರಸ್ತೆ, ಕಬ್ಬನ್ ಪಾರ್ಕ್ ಸುತ್ತಮುತ್ತ, ವಿಧಾನಸೌಧ, ಕೆಂಪೇಗೌಡ ಬಸ್ ನಿಲ್ದಾಣ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕಾಟನ್ಪೇಟೆ, ಬಿನ್ನಿಪೇಟೆ, ಚಾಮರಾಜಪೇಟೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ ಸೇರಿದಂತೆ ಮತ್ತಿತರ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.