ಬೆಂಗಳೂರು: ಜೂನ್ ಬಳಿಕ ರಾಜ್ಯದಲ್ಲಿ ಕೊರೊನಾ ಉಲ್ಬಣಗೊಂಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗುತ್ತದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ನಗರ ಪ್ರದೇಶಗಳಲ್ಲಿನ ಸ್ಥಿತಿವಂತರ ಮಕ್ಕಳು ನಿರಾತಂಕವಾಗಿ ಆನ್ಲೈನ್ ಮೂಲಕ ಶಿಕ್ಷಣ ಮುಂದುವರೆಸಿದ್ದಾರೆ. ಆದರೆ, ರಾಜ್ಯದ ಬುಡಕಟ್ಟು ಸಮುದಾಯಗಳ, ಹಿಂದುಳಿದ ಮತ್ತು ಕುಗ್ರಾಮಗಳ ಮಕ್ಕಳು ಮಾತ್ರ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ ನಂತರವೂ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿಯೇ ನಗರ ಪ್ರದೇಶದ ಶಾಲೆಗಳು, ಅದರಲ್ಲೂ ಐಸಿಎಸ್ಸಿ ಮತ್ತು ಸಿಬಿಎಸ್ಸಿ ಶಾಲೆಗಳು ಆನ್ ಲೈನ್ ಮೂಲಕವೇ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಗಳನ್ನು ಬೋಧಿಸುತ್ತಿವೆ. ಹೀಗಾಗಿ ಈ ಶಾಲೆಗಳ ಮಕ್ಕಳಿಗೆ ಸದ್ಯಕ್ಕೆ ಯಾವುದೇ ತೊಂದರೆ ಎದುರಾಗಿಲ್ಲ. ಇನ್ನು ಈ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಅಗತ್ಯಾನುಸಾರ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಅಗತ್ಯ ಉಪಕರಣಗಳನ್ನು ಪೋಷಕರು ಕೊಡಿಸಿದ್ದಾರೆ. ಜೊತೆಗೆ ಈ ಮಕ್ಕಳಿಗೆ ಉಪಕರಣಗಳ ಬಳಕೆ ಮತ್ತು ಇಂಗ್ಲಿಷ್ ಭಾಷೆ ತಿಳಿದಿರುವುದರಿಂದ ಕಲಿಕೆ ನಿರಾತಂಕವಾಗಿ ಸಾಗಿದೆ.
ಆದರೆ, ಗ್ರಾಮೀಣ ಭಾಗದ, ಕುಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಇಂತಹ ಯಾವ ಸೌಲಭ್ಯವೂ ಇಲ್ಲ. ಮೊದಲಿಗೆ ಸರ್ಕಾರ ಶಾಲೆಗಳನ್ನು ಆರಂಭಿಸುವ ಸ್ಥಿತಿಯಲ್ಲಿ ಇಲ್ಲ. ಸದ್ಯ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕಗಳನ್ನು ಪೋಷಕರಿಗೆ ತಲುಪಿಸಲು ಆದೇಶಿಸಿರುವ ಸರ್ಕಾರ ಒಂದು ವೇಳೆ ಶಾಲೆ ಆರಂಭಿಸಿದರೂ ಆನ್ಲೈನ್ ಮೂಲಕ ಪಾಠ ಕಲಿಯುವ ಭಾಗ್ಯ ಈ ಮಕ್ಕಳಿಗೆ ಇಲ್ಲ. ಗುಡ್ಡಗಾಡುಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯಗಳ ಮತ್ತು ಕುಗ್ರಾಮಗಳ ಬಡ ಪೋಷಕರಿಗೆ ಲ್ಯಾಪ್ ಟಾಪ್, ಮೊಬೈಲ್ ಕೊಡಿಸುವ ಶಕ್ತಿ ಇಲ್ಲ. ಕೊಡಿಸಿದರೂ ಸಮರ್ಪಕ ಇಂಟರ್ನೆಟ್ ಸೌಲಭ್ಯವಿಲ್ಲ. ಹಾಗೆಯೇ, ಆನ್ ಲೈನ್ ಆ್ಯಪ್ಗಳ ತಂತ್ರಜ್ಞಾನ ಅರ್ಥೈಸಿಕೊಳ್ಳುವಷ್ಟು ಇಂಗ್ಲಿಷ್ ಭಾಷಾ ಜ್ಞಾನ ಈ ಮಕ್ಕಳಿಗಿಲ್ಲ.
ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವೆ ತಾರತಮ್ಯ ಉಂಟಾಗಬಾರದು ಮತ್ತು ಆನ್ ಲೈನ್ ಶಿಕ್ಷಣ ಹೆಚ್ಚು ಪರಿಣಾಮಕಾರಿಯಲ್ಲ ಎಂದು ಆಲೋಚನೆಯಲ್ಲಿ ಸರ್ಕಾರ ಜೂನ್ನಲ್ಲಿ ಆನ್ ಲೈನ್ ತರಗತಿಗಳನ್ನು ನಿರ್ಬಂಧಿಸಿತ್ತು. ಇದಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದಾಗ, ರಾಜ್ಯದಲ್ಲಿ 1ರಿಂದ 10 ನೇ ತರಗತಿವರೆಗೆ 1.44 ಕೋಟಿ ಮಕ್ಕಳಿದ್ದು ಇವರಲ್ಲಿ 45.88 ಲಕ್ಷ ಮಕ್ಕಳು ಗ್ರಾಮೀಣ ಭಾಗದವರಾಗಿದ್ದಾರೆ. ಹೀಗಾಗಿ ಆನ್ ಲೈನ್ ಶಿಕ್ಷಣಕ್ಕೆ ಒಪ್ಪಿಗೆ ನೀಡಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ವಾದಿಸಿತ್ತು. ಸದ್ಯ ಗ್ರಾಮೀಣ ಭಾಗದ ಮಕ್ಕಳಿಗೆ ಅನ್ಯಾಯವಾಗದಂತೆ ಸರ್ಕಾರಿ ಟಿವಿ ವಾಹಿನಿ ಮೂಲಕ ಪಠ್ಯ ಬೋಧಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ಸಂದರ್ಭದಲ್ಲಿ, ರಾಜ್ಯ ಸರ್ಕಾರದ ಪಠ್ಯಕ್ರಮ ಬೋಧಿಸುವ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿದ್ಯಾರ್ಥಿಗಳಲ್ಲಿಯೂ ಆತಂಕ ಮೂಡಿಸಿದೆ. ಹೀಗಾಗಿಯೇ ಇತ್ತೀಚೆಗೆ ಕೊಡಗು ಜಿಲ್ಲೆ ವಿರಾಜಪೇಟೆ ಬಳಿಯ ಆದಿವಾಸಿ ಹಾಡಿಯ ಮಕ್ಕಳು ತಮಗೂ ಸಮಾನ ಶಿಕ್ಷಣ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಅದೇ ರೀತಿ ರಾಯಚೂರಿನ ಸಿಂಧನೂರು, ಕೊಪ್ಪಳ ಜಿಲ್ಲೆಗಳ ಕುಗ್ರಾಮಗಳ ಶಾಲಾ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ 70 ಸಾವಿರಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಬಡ ಮಕ್ಕಳು ಶೈಕ್ಷಣಿಕ ಹಕ್ಕಿನಿಂದ ವಂಚಿತರಾಗಬಾರದು ಎಂದು ಉದ್ದೇಶದಲ್ಲಿ ಸರ್ಕಾರ ಶಾಲಾ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಆದರೂ ಸಾವಿರಾರು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಗ್ರಾಮೀಣ ಭಾಗದ ನೂರಾರು ಶಾಲೆಗಳಲ್ಲಿ ಇಂದಿಗೂ ಕಟ್ಟಡ ಕೊರತೆ ಸೇರಿದಂತೆ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಇವೆಲ್ಲದರಿಂದಾಗಿ ಶಿಕ್ಷಣದಿಂದ ದೂರ ಉಳಿಯುತ್ತಿರುವ ಮಕ್ಕಳ ಸಂಖ್ಯೆ ಏರುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆ.
ಸದ್ಯ ಜನರ ಜೀವ ತೆಗೆಯುತ್ತಿರುವ ಕೊರೊನಾ ಮಹಾಮಾರಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ಕಲ್ಲು ಹಾಕುತ್ತಿರುವುದು ಮತ್ತು ಉಳ್ಳವರ ಮಕ್ಕಳೊಂದಿಗೆ ಇವರ ಅಂತರವನ್ನು ವಿಸ್ತರಿಸುತ್ತಿರುವುದು ನಿಜಕ್ಕೂ ವಿಪರ್ಯಾಸ.