ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರು ಹಾಗೂ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಸುರಕ್ಷಿತವಾಗಿ ಕರೆತರಲು ವಿದೇಶಾಂಗ ಸಚಿವಾಲಯಕ್ಕೆ ಸೂಚನೆ ನೀಡಬೇಕೆಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡರು, ಯುದ್ಧ ನಡೆಯುತ್ತಿರುವ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಯೋಗ ಕ್ಷೇಮಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ಕೋರಿದ್ದಾರೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಕಷ್ಟಕರವಾದ ಪರಿಸ್ಥಿತಿ ಉಕ್ರೇನ್ನಲ್ಲಿ ಉಂಟಾಗಿದೆ. ಆದರೂ ಭಾರತೀಯ ನಾಗರಿಕರನ್ನು ಭಾರತಕ್ಕೆ ಕರೆತರಲಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಕರೆತರಲು ಕೇಂದ್ರ ಸರ್ಕಾರ ವಿಶೇಷ ಪ್ರಯತ್ನ ಮಾಡುತ್ತಿರುವುದು ಮೆಚ್ಚುವಂತಹ ವಿಚಾರ. ಕರ್ನಾಟಕ ಹಾಗೂ ಹಾಸನ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಯುದ್ಧ ವಲಯದಲ್ಲಿ ಸಿಲುಕಿದ್ದಾರೆ. ರಷ್ಯಾ ದಾಳಿಯಿಂದಾಗಿ ಉಕ್ರೇನ್ನಲ್ಲಿ ತೀವ್ರಗತಿಯಲ್ಲಿ ಹದಗೆಡುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಈ ವಿಚಾರ ತಿಳಿಯುತ್ತಿದೆ. ಅಲ್ಲಿ ನೆಲೆಸಿರುವ ಜನರಿಗೆ ತೀವ್ರ ತೊಂದರೆ ಹಾಗೂ ಅಪಾಯದ ಸನ್ನಿವೇಶದ ವಿಚಾರಗಳು ಕೇಳಿ ಬರುತ್ತಿವೆ. ನಾಗರಿಕ ಮತ್ತು ವಸತಿ ಪ್ರದೇಶಗಳಿಗೂ ಬಾಂಬ್ ದಾಳಿ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದಿದ್ದಾರೆ.
ದೇವೇಗೌಡರ ಟ್ವೀಟ್: ಬಗ್ಗೆ ಟ್ವೀಟ್ ಮಾಡಿರುವ ಗೌಡರು, ಉಕ್ರೇನ್ನಲ್ಲಿ ಸಿಕ್ಕಿಬಿದ್ದಿರುವ ನಮ್ಮ ಯುವ ನಾಗರಿಕರು ಸ್ಥಳಾಂತರಿಸಲು ತೀವ್ರ ಮನವಿ ಮಾಡುತ್ತಿರುವ ವಿಡಿಯೋಗಳನ್ನು ನಾನು ನೋಡುತ್ತಿದ್ದೇನೆ. ಅವರ ಅವಸ್ಥೆ ನೋಡಿದರೆ ಹೃದಯ ಕಲಕುತ್ತದೆ. ಸುರಕ್ಷಿತವಾಗಿ ಮನೆಗೆ ಮರಳಲು ಅವರ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಆ ದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ನೆಲದ ಮೇಲೆ ಅನಿಶ್ಚಿತತೆ ಇದೆ.
ಕಾರ್ಯಾಚರಣೆಯ ಲಿಂಕ್ಗಳು ಮುರಿದುಹೋದಾಗ, ನಮ್ಮ ಅಧಿಕಾರಿಗಳು ಮತ್ತು ರಾಯಭಾರಿ ಕಚೇರಿಗಳು ಕೈಯಲ್ಲಿರುವ ಕೆಲಸದ ಮೇಲೆ ಕೇಂದ್ರೀಕರಿಸಲು ನಾವು ಬೆಂಬಲಿಸುವುದು ನ್ಯಾಯಯುತವಾಗಿದೆ. ಈ ಕಾರ್ಯಾಚರಣೆಗಳು ಕಠಿಣ ಮತ್ತು ಸೂಕ್ಷ್ಮವಾಗಿರಬಹುದು ಎಂದು ನನಗೆ ಅನುಭವದಿಂದ ತಿಳಿದಿದೆ. ತೆರವು ಪ್ರಕ್ರಿಯೆಯನ್ನು ನಾವು ರಾಜಕೀಯಗೊಳಿಸಬಾರದು. ಇದರಿಂದ ಕಾರ್ಯಾಚರಣೆ ನಡೆಸುವವರ ಮನೋಸ್ಥೈರ್ಯ ಕುಗ್ಗಿಸುತ್ತದೆ. ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಹತ್ಯೆಯಾಗಿರುವ ಹರ್ಷ ಮನೆಗೆ ಸಿಟಿ ರವಿ ಭೇಟಿ, ಸಾಂತ್ವನ