ಬೆಂಗಳೂರು: ಸಾರಿಗೆ ಮುಷ್ಕರ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೋರಾಟಗಾರರ ಕೆಲ ಬೇಡಿಕೆ ಈಡೇರಿಕೆಗೆ ನಿರ್ಧಾರ ಕೈಗೊಂಡು ಅಂತಿಮ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ.
ಅದರಂತೆ ಡಿಸಿಎಂ ಸವದಿ ನೇತೃತ್ವದಲ್ಲಿ ಸಚಿವರ ತಂಡ ವಿಕಾಸಸೌಧಕ್ಕೆ ತೆರಳಿದ್ದು, ಸದ್ಯದಲ್ಲೇ ಯೂನಿಯನ್ ಮುಖಂಡರ ಜೊತೆ ಕೊನೆ ಸುತ್ತಿನ ಮಾತುಕತೆಯನ್ನು ನಡೆಸಲಿದೆ.
ಸಾರಿಗೆ ನೌಕರರ ಕೆಲ ಬೇಡಿಕೆ ಈಡೇರಿಕೆಗೆ ಸಿಎಂ ಅಸ್ತು:
ಸಿಎಂ ಜೊತೆಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ನಮ್ಮ ಸಾರಿಗೆ ನೌಕರರ ಪ್ರಮುಖರನ್ನು ಕರೆದು ಎರಡು ಸುತ್ತಿನ ಮಾತುಕತೆಯನ್ನು ಮುಗಿಸಲಾಗಿದೆ. ಸರ್ಕಾರ ಕೂಡ ಕೆಲವೊಂದು ಬೇಡಿಕೆಗೆ ಸಹಮತ ಕೊಟ್ಟಿದೆ. ಸಿಬ್ಬಂದಿ ಸುಮಾರು 10 ಬೇಡಿಕೆಗಳನ್ನು ಕೇಳಿದ್ದರು. ಅದರಲ್ಲಿ ಈಡೇರಿಕೆ ಮಾಡುವ ಕುರಿತು ನಮ್ಮ ಹಣಕಾಸು ಇತಿಮಿತಿಯೊಳಗೆ ನಾವು ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಅವರು ಕೂಡ ಒಂದು ಹೆಜ್ಜೆ ಹಿಂದೆ ಸರಿದು ಎಲ್ಲಾ ಚರ್ಚೆ ಆಗಿದೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಲಾಗಿದೆ. ಸಿಎಂ ಒಪ್ಪಿಗೆ ಪಡೆದು ಕೊನೆಯ ಸುತ್ತಿನ ಮಾತುಕತೆ ನಡೆಸಿ ಅರ್ಧ ಗಂಟೆಯಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಅಂತ್ಯವನ್ನು ಹಾಡುವ ನಿರ್ಣಯವನ್ನು ಮಾಡಿದ್ದೇವೆ. ಯೂನಿಯನ್ ಮುಖಂಡರ ಸಮಕ್ಷಮದಲ್ಲಿ ವಿಧಾನಸೌಧದಲ್ಲಿ ಪ್ರಕಟಣೆಯನ್ನು ಕೊಟ್ಟು ಇಂದು ಮುಷ್ಕರದ ಸಮಸ್ಯೆಯನ್ನು ಮುಗಿಸುವ ತೀರ್ಮಾನಕ್ಕೆ ನಾವೆಲ್ಲ ಬಂದಿದ್ದೇವೆ ಎಂದರು.
ಓದಿ: ಸಾರಿಗೆ ಸಿಬ್ಬಂದಿ ಮುಷ್ಕರ ; ವಿಕಾಸಸೌಧದ ನಂತರ ಸಿಎಂ ನಿವಾಸದಲ್ಲಿ ಮಹತ್ವದ ಸಭೆ
ಸಾರಿಗೆ ಮುಷ್ಕರ ಕುರಿತು ಸಭೆ:
ಬೆಳಗ್ಗೆಯಿಂದ ಬೊಮ್ಮಾಯಿ, ಆರ್.ಅಶೋಕ್ ಸೇರಿ ನಾವು ಮೂರು ಜನ ಅನೇಕ ಹಂತದಲ್ಲಿ ಮಾತುಕತೆಗಳನ್ನು ನಡೆಸಿ ಅಂತಿಮ ತೀರ್ಮಾನಕ್ಕೆ ಈಗಾಗಲೇ ಬಂದಿದ್ದೇವೆ. ಸರ್ಕಾರ ಮತ್ತು ಪ್ರತಿಭಟನಾಕಾರರ ಜೊತೆ ನಿರಂತರ ಸಂಪರ್ಕ ಸೇತುವೆಯಾಗಿ ನಂದೀಶ್ ರೆಡ್ಡಿ ಕೆಲಸ ಮಾಡಿದರು. ಈಗ ಪ್ರತಿಭಟನಾನಿರತರಿಗೂ ಕೂಡ ನಾವು ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೊರೊನಾ ಸಂದರ್ಭದಲ್ಲಿ ಸರ್ಕಾರದಿಂದ ವೇತನವನ್ನು ಪಾವತಿ ಮಾಡಲಾಗಿದೆ. ನಾನು ಕೂಡ ಅವರಿಗೆ ಮಧ್ಯರಾತ್ರಿ 12 ಗಂಟೆವರೆಗೆ ಯಾವಾಗ ಬೇಕಾದರೂ ಚರ್ಚೆ ಮಾಡಲು ಬರಬಹುದು ಎಂದು ಆಹ್ವಾನ ನೀಡಿದ್ದೇನೆ. ಮುಖ್ಯಮಂತ್ರಿಗಳು ಕೂಡ ಮನವಿ ಮಾಡಿದ್ದರು ಎಂದು ವಿವರಿಸಿದರು.
'ಅರ್ಧಗಂಟೆಯಲ್ಲಿ ಮಾತುಕತೆ ಮುಗಿಸಿ ಫಲಿತಾಂಶ ಘೋಷಣೆ'
ಇದೀಗ ನಾವು ಅಂತಿಮ ನಿರ್ಣಯಕ್ಕೆ ನಾವು ಬಂದಿದ್ದೇವೆ. ಇನ್ನು ಅರ್ಧ ಗಂಟೆಯಲ್ಲಿ ಕೊನೆ ಸುತ್ತಿನ ಮಾತುಕತೆ ಮುಗಿಸಿ ಫಲಿತಾಂಶ ಘೋಷಣೆ ಮಾಡುತ್ತೇವೆ. ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿರುವನ್ನ ಆಹ್ವಾನಿಸಿಲ್ಲ. ಅದರ ಅಗತ್ಯವಿಲ್ಲ, ಎಲ್ಲವನ್ನೂ ಕೊನೆಯ ಸುತ್ತಿನ ಸಭೆಯಲ್ಲಿ ನಿರ್ಣಯಿಸಿ ಸಮಸ್ಯೆಗೆ ಕೊನೆ ಹಾಡಲಾಗುತ್ತದೆ ಎಂದು ತಿಳಿಸಿದರು.