ಬೆಂಗಳೂರು: ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿಯನ್ನು ಒಮ್ಮೆ ತೆರವುಗೊಳಿಸಿ ಸುಮ್ಮನಾಗುವುದಲ್ಲ. ನಿರಂತರವಾಗಿ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಾಕೀತು ಮಾಡಿದರು. 'ಆಯುಕ್ತರ ನಡೆ, ವಲಯ ಕಚೇರಿ ಕಡೆ' ಕಾರ್ಯಕ್ರಮದಡಿ ರಾಜರಾಜೇಶ್ವರಿನಗರ ವಲಯ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಉಲ್ಲಾಳ ರಸ್ತೆಯನ್ನು ಅಗಲೀಕರಣ ಮಾಡಲಾಗಿದ್ದು, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಳ್ಳುತ್ತಿದೆ. ಒತ್ತುವರಿ ಆಗದಂತೆ ಕ್ರಮ ವಹಿಸುವಂತೆ ಸ್ಥಳೀಯರು ಮನವಿ ಮಾಡಿದರು. ಆಗ ಪಾದಚಾರಿ ಮಾರ್ಗ ಒತ್ತುವರಿ ಆಗದಂತೆ ಕ್ರಮ ವಹಿಸಿ, ತೆರವುಗೊಳಿಸಿದ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಉಲ್ಲಾಳ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕಸದಿಂದ ಬ್ಲಾಕ್ ಸ್ಪಾಟ್ ಸೃಷ್ಟಿಯಾಗುತ್ತಿವೆ. ಕಟ್ಟಡ ತ್ಯಾಜ್ಯವನ್ನು ರಾತ್ರಿ ವೇಳೆ ಸುರಿಯಲಾಗುತ್ತದೆ. ಅದನ್ನು ತಪ್ಪಿಸುವಂತೆ ಸಾರ್ವಜನಿಕರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಿದ ತುಷಾರ್ ಗಿರಿನಾಥ್, ಮಾರ್ಷಲ್ಗಳು ರಾತ್ರಿ ವೇಳೆ ಗಸ್ತು ಸುತ್ತಬೇಕು. ಕಸ ಹಾಕುವವರು ಸಿಕ್ಕರೆ ಅವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.
ತ್ಯಾಜ್ಯ ಮಟ್ಟದಲ್ಲಿ ಸಂಸ್ಕರಣೆ: ಇದೇ ವೇಳೆ ಲಿಂಗಧೀರನಹಳ್ಳಿಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಕೆಟ್ಟ ವಾಸನೆ ಬರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಕಸದ ಸಮಸ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ವಾರ್ಡ್ ಮಟ್ಟದಲ್ಲೇ ತ್ಯಾಜ್ಯ ಸಂಸ್ಕರಿಸಲು ಕಾಂಪೋಸ್ಟಿಂಗ್ ಪ್ಲಾಂಟ್ಗಳನ್ನು ಅಳವಡಿಸಲು ತ್ವರಿತವಾಗಿ ಸ್ಥಳ ಗುರುತಿಸಿ ಎಂದು ತಿಳಿಸಿದರು.
ಜೊತೆಗೆ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಕೆ ತಡೆಯಲು ವಿಫಲವಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ಗಳಿಗೆ ಕೂಡಲೇ ಗುರುತಿನ ಚೀಟಿ ವಿತರಿಸಬೇಕು ಎಂದೂ ಸೂಚಿಸಿದರು. ಸಭೆಯಲ್ಲಿ ವಲಯ ಜಂಟಿ ಆಯುಕ್ತ ನಾಗರಾಜ್, ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಸೇರಿದಂತೆ ಮೊದಲಾದವರಿದ್ದರು.
ಇದನ್ನೂ ಓದಿ: ಮಂತ್ರಿ ಗ್ರೂಪ್ನ ₹300 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಿದ ಇಡಿ