ಬೆಂಗಳೂರು: ವಿಧಾನಸಭೆ ಎರಡು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಕುಸುಮ ಹನುಮಂತರಾಯಪ್ಪ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದಿಂದ ಟಿ.ಬಿ ಜಯಚಂದ್ರ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಲಾಗಿದೆ.
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಒಪ್ಪಿಗೆಯ ಮೇರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಪ್ರಕಟಣೆ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಒಕ್ಕಲಿಗ ಪ್ರಾಬಲ್ಯವನ್ನು ಹೊಂದಿರುವ ಹಿನ್ನೆಲೆ ಇದೇ ಸಮುದಾಯದ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದರು.
![Congress candidates final for by elelction](https://etvbharatimages.akamaized.net/etvbharat/prod-images/kn-bng-04-ticket-final-script-7208077_07102020134733_0710f_1602058653_350.jpg)
ರಾಜ್ಯ ನಾಯಕರು ಕೇಂದ್ರಕ್ಕೆ ಕಳುಹಿಸಿಕೊಟ್ಟ ಪಟ್ಟಿಯಲ್ಲಿ ಕುಸುಮ ಹನುಮಂತರಾಯಪ್ಪ ಮೊದಲ ಪ್ರಾಶಸ್ತ್ಯದಲ್ಲಿದ್ದರೆ, ಎರಡನೇಯವರಾಗಿ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಹೆಸರನ್ನ ಶಿಫಾರಸು ಮಾಡಲಾಗಿತ್ತು. ಇದೀಗ ಪಕ್ಷದ ಹೈಕಮಾಂಡ್ ಮೂರು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಕುಸುಮ ಹನುಮಂತರಾಯಪ್ಪಗೆ ಟಿಕೆಟ್ ಅಂತಿಮಗೊಳಿಸಿದೆ.
ಐಎಎಸ್ ಅಧಿಕಾರಿಯಾಗಿದ್ದ ಡಿಕೆ ರವಿ ಅವರ ಪತ್ನಿ ಕುಸುಮಾಗೆ ಟಿಕೆಟ್ ನೀಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಡಿಕೆ ರವಿ ಕುಟುಂಬದವರು ಕುಸುಮಾಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದರು. ಆದರೂ ಕಾಂಗ್ರೆಸ್ ಪಕ್ಷ ಈ ಒತ್ತಡಕ್ಕೆ ಮಣಿದಿಲ್ಲ. ಕೊನೆಗೂ ರಾಜರಾಜೇಶ್ವರಿನಗರದಿಂದ ಕುಸುಮ ಸ್ಪರ್ಧೆ ಖಚಿತವಾಗಿದೆ.
ಶಿರಾ ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಟಿ.ಬಿ ಜಯಚಂದ್ರ ಅಭ್ಯರ್ಥಿಯಾಗಿದ್ದಾರೆ. 2008 ಹಾಗೂ 2013ರಲ್ಲಿ ನಿರಂತರವಾಗಿ ಗೆಲುವು ಸಾಧಿಸಿದ್ದ ಜಯಚಂದ್ರ 2018ರ ಚುನಾವಣೆಯಲ್ಲಿ ಸತ್ಯನಾರಾಯಣ ವಿರುದ್ಧ 12,000 ಮತ ಅಂತರದಿಂದ ಸೋಲನುಭವಿಸಿದ್ದರು. ಕ್ಷೇತ್ರದಲ್ಲಿ ಈಗಲೂ ಉತ್ತಮ ಹಿಡಿತ ಹಾಗೂ ಹೆಸರು ಹೊಂದಿರುವ ಹಿನ್ನೆಲೆ ಅವರಿಗೆ ಟಿಕೆಟ್ ಅಂತಿಮಗೊಳಿಸಲಾಗಿತ್ತು. ರಾಜ್ಯ ಕಾಂಗ್ರೆಸ್ ನಾಯಕರ ಮನವಿಯನ್ನು ಪುರಸ್ಕರಿಸಿದ ಕಾಂಗ್ರೆಸ್ ಹೈಕಮಾಂಡ್ ಜಯಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.