ಬೆಂಗಳೂರು: ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕೆಂದು ಅಧಿಕಾರಿ ಸೋಗಿನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿಗೆ ಕರೆ ಮಾಡಿ ಸೈಬರ್ ಖದೀಮರು 89 ಸಾವಿರ ರೂಪಾಯಿ ವಂಚಿಸಿದ್ದಾರೆ.
ವಂಚನೆ ಸಂಬಂಧ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ದೂರು ನೀಡಿದ ಮೇರೆಗೆ ಆಗ್ನೇಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.11ರಂದು ಎಸ್ ಬಿಐ ಬ್ಯಾಂಕ್ ಕಡೆಯಿಂದ ಶಂಕರ್ ಬಿದರಿ ಸಂದೇಶ ಸ್ವೀಕರಿಸಿದ್ದಾರೆ.
ಕೆಲ ಹೊತ್ತಿನ ಬಳಿಕ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ನಂಬರ್ ಅಪಡೇಟ್ ಮಾಡಬೇಕು. ಇಲ್ಲದಿದ್ದರೆ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ.
ನಿಜವಾಗಿಯೂ ಬ್ಯಾಂಕ್ ಅಧಿಕಾರಿಯೇ ಕರೆ ಮಾಡುತ್ತಿದ್ದಾರೆ ಎಂದು ನಂಬಿದ ಬಿದರಿ ಸೈಬರ್ ಖದೀಮ ಕೇಳಿದ ವಿವರಗಳನ್ನು ಒದಗಿಸಿದ್ದಾರೆ. ಮುಖ್ಯವಾಗಿ ಒನ್ ಟೈಮ್ ಪಾರ್ಸ್ ವರ್ಡ್ (ಒಟಿಪಿ) ನಂಬರ್ ಸಹ ನೀಡಿದ್ದಾರೆ. ನಂಬರ್ ನೀಡುತ್ತಿದ್ದಂತೆ ಬ್ಯಾಂಕ್ ನಲ್ಲಿದ್ದ 89 ಸಾವಿರ ರೂಪಾಯಿ ದೋಚಿದ್ದಾರೆ.
ಹಣ ಕಡಿತಗೊಂಡಿರುವ ಸಂದೇಶ ಬರುತ್ತಿದ್ದಂತೆ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಠಾಣೆ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆ ಇಮೇಲ್ ಖಾತೆ ಕೂಡ ಹ್ಯಾಕ್ ಆಗಿತ್ತು:
ನಿವೃತ್ತ ಡಿಜಿ ಶಂಕರ್ ಬಿದರಿಯವರ ಇಮೇಲ್ ಖಾತೆ ದುರ್ಬಳಕೆ ಮಾಡಿಕೊಂಡು ಹಣ ವಂಚಿಸಿದ್ದ ಮೂವರು ಖದೀಮರನ್ನು ಪೊಲೀಸರು ಕಳೆದ ಮಾರ್ಚ್ 10 ರಂದು ಬಂಧಿಸಿದ್ದರು.
ಹೆಚ್ಚಿನ ಓದಿಗೆ ಈ ಲಿಂಕ್ ಕ್ಲಿಕ್ ಮಾಡಿ: ಶಂಕರ್ ಬಿದರಿ ಇಮೇಲ್ ಖಾತೆ ಹ್ಯಾಕ್ ಮಾಡಿದ ಖದೀಮರು ಅರೆಸ್ಟ್!