ಬೆಂಗಳೂರು: "ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ಸೋಮವಾರದೊಳಗೆ ಎಫ್ಐಆರ್ ದಾಖಲಿಸಬೇಕು. ಇಲ್ಲವಾದರೆ, ನಾನು ವಿಧಾನಸೌಧದ ಮುಂದಿನ ಡಾ.ಅಂಬೇಡ್ಕರ್ ಪ್ರತಿಮೆ ಅಥವಾ ಒಳಗಿರುವ ಗಾಂಧೀಜಿ ಪ್ರತಿಮೆ ಎದುರು ನಿರಶನ ಮಾಡುತ್ತೇನೆ" ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಊರನ್ನು ಹೊಲಗೇರಿ ಮಾಡಬೇಡಿ ಸ್ವಚ್ಛವಾಗಿಡಿ, ಹೊಲಸು ಮಾಡಬೇಡಿ ಎಂದ ವಿಡಿಯೋ ವೈರಲ್ ಆಗುತ್ತಿದೆ. ಉಪೇಂದ್ರ ಅವರು ಊರಿದ್ದ ಕಡೆ ಹೊಲಗೇರಿ ಎಂದಿದಕ್ಕೆ ದಲಿತ ಸಂಘಟನೆಗಳು ಹೋರಾಟ ಮಾಡಿದ್ದವು. ತಕ್ಷಣ ಎಫ್ಐಆರ್ ದಾಖಲು ಮಾಡಿದ್ದರು. ಆದರೆ, ಮಲ್ಲಿಕಾರ್ಜುನ್ ಅವರ ಹೇಳಿಕೆ ವಿರುದ್ಧ ದೂರನ್ನು ಪಡೆದಿಲ್ಲ. ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ರಕ್ಷಣೆಗೆ ಇಡೀ ಸರ್ಕಾರ ನಿಂತಿದೆ, ಹಿಂದೆ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಲಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಆರೋಪಿಗಳ ಪರ ನಿಂತಿದ್ದಲ್ಲದೆ, ಆರೋಪಿಗಳ ಕೇಸುಗಳನ್ನು ಹಿಂಪಡೆಯುವ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿದರು.
"ನಿನ್ನೆ ದಲಿತ ಮುಖಂಡರು ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಇವತ್ತು ಅನೇಕರು ಅದನ್ನು ವಿರೋಧಿಸಿ ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ. ದಲಿತ ಸಮುದಾಯಗಳ ಬಗ್ಗೆ ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಬಹಳಷ್ಟು ಸಾರಿ ಗಮನಿಸಿದ್ದೇವೆ. ಕಾಂಗ್ರೆಸ್ ದಲಿತ ವಿರೋಧಿ. ಕಾಂಗ್ರೆಸ್ ಒಳಗಿನ ನಡವಳಿಕೆ ನನಗೆ ಚೆನ್ನಾಗಿ ಗೊತ್ತಿದೆ" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
"ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಸೇರಿ ಹಲವು ಸಚಿವರು ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ. ಕಂಟ್ರಾಕ್ಟರ್ಗಳ ಕಮಿಷನ್ ಆರೋಪದ ವಿಷಯವನ್ನು ಬೇರೆಡೆ ತಿರುಗಿಸಲು ಬಿಜೆಪಿಯನ್ನು ಮುಗಿಸಿ ಬಿಡುವುದಾಗಿ ಹೇಳುತ್ತಾರೆ. ಬಿಜೆಪಿಯನ್ನು ಯಾರೂ ಬಿಡುವವರಿಲ್ಲ. ನಮ್ಮನ್ನು ಬಿಟ್ಟು ಹೋದವರು ಭ್ರಮನಿರಸನರಾಗಿದ್ದಾರೆ. ಕಾಂಗ್ರೆಸ್ಸಿಗರ ಹೇಳಿಕೆ ದಾರಿ ತಪ್ಪಿಸುವ ಕೆಲಸ" ಎಂದು ಟೀಕಿಸಿದರು.
"ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಮ್ಮ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಸರ್ಕಾರದ ಟಾರ್ಗೆಟ್ ಮಾಡುತ್ತಿದೆ. ಇಂಥವರನ್ನು ಹದ್ದುಬಸ್ತಿನಲ್ಲಿಡಿ, ಇಂಥವರನ್ನು ಬಲಿ ಹಾಕಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಆದ್ದರಿಂದ ಸಕ್ರಿಯರ ವಿರುದ್ಧ ಎಫ್ಐಆರ್ ಮಾಡುತ್ತಿದ್ದಾರೆ. ತುಮಕೂರಿನ ಶಕುಂತಲಾ ಅವರ ಮೇಲೆ ಎಫ್ಐಆರ್ ಹಾಕಿದ್ದಾರೆ. ಆದರೆ, ಮಲ್ಲಿಕಾರ್ಜುನರ ಮೇಲೆ ಕ್ರಮ ಇಲ್ಲ, ಕಾಂಗ್ರೆಸ್ಸಿಗರು ಅಧಿಕಾರದ ಮದದಿಂದ ಮೆರೆಯುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. "ಈ ದಲಿತ ವಿರೋಧಿ ಸರ್ಕಾರಕ್ಕೆ ತಕ್ಕ ಶಾಸ್ತಿಯನ್ನು ನಾವು ಕಲಿಸಲೇಬೇಕಾಗಿದೆ. ದಲಿತ ಸಂಘಟನೆಗಳು ನಾಳೆಯಿಂದ ಬೀದಿಗಿಳಿದು ಹೋರಾಟ ಮಾಡಲಿದ್ದು, ನಾನು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ" ಎಂದರು.
ಇದನ್ನೂ ಓದಿ: Sudham Das: ಪರಿಷತ್ಗೆ ಸುಧಾಮ್ ದಾಸ್ ನಾಮನಿರ್ದೇಶನ; ನಾಲ್ವರು ಸಚಿವರ ವಿರೋಧ, ಖರ್ಗೆಗೆ ಪತ್ರ