ಬೆಂಗಳೂರು: ಬಿಜೆಪಿ ಯಾರನ್ನೂ ಕಡೆಗಣಿಸುವುದಿಲ್ಲ, ಯಾರನ್ನೂ ತುಳಿಯುವುದಿಲ್ಲ ಎಂಬ ವಿಚಾರವನ್ನು ಕಾರ್ಯಕರ್ತರು ನೆನಪಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಪಕ್ಷದ ಪ್ರಕೋಷ್ಠಗಳ ಪ್ರಮುಖರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ನಗರದ ನ್ಯೂ ತಿಪ್ಪಸಂದ್ರ ಮುಖ್ಯರಸ್ತೆಯ ಶಕ್ತಿಗಣಪತಿ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿ ಆಗುವ ಪರಿಕಲ್ಪನೆ ಈಡೇರಲು ಪ್ರಕೋಷ್ಠಗಳು ಸರ್ವರನ್ನೂ ಪಕ್ಷಕ್ಕೆ ಜೋಡಿಸುವ ಕೆಲಸ ಮಾಡಬೇಕು ಎಂದು ಆಶಿಸಿದರು.
ನಮ್ಮ ಪ್ರಕೋಷ್ಠದ ವ್ಯಾಪ್ತಿಯ ಸಮಸ್ಯೆ ಬಂದಾಗ ಅದನ್ನು ಪರಿಹರಿಸಬೇಕು, ಬಿಜೆಪಿಯಲ್ಲಿ ಕೆಲಸ ಮಾಡಿದವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ. ಅವರ ಕೆಲಸವನ್ನು ಗುರುತಿಸುವ ಕೆಲಸವನ್ನು ಪಕ್ಷ ಮಾಡುತ್ತದೆ. ಬಿಜೆಪಿ ಯಾರನ್ನೂ ಕಡೆಗಣಿಸುವುದಿಲ್ಲ, ಯಾರನ್ನೂ ತುಳಿಯುವುದಿಲ್ಲ ಎಂಬ ವಿಚಾರವನ್ನು ಕಾರ್ಯಕರ್ತರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
![BJP not ignore anyone but work faithfully](https://etvbharatimages.akamaized.net/etvbharat/prod-images/kn-bng-09-bjp-prakoshta-meeting-script-7208080_20122020204701_2012f_1608477421_90.jpg)
ಅಧಿಕಾರ ನಡೆಸಲು ಬಂದವರು ನಾವಲ್ಲ. ಡಾ. ಮನಮೋಹನ್ ಸಿಂಗ್ ಅವರು 10 ವರ್ಷ, ದೇವೇಗೌಡರು ಒಂದು ವರ್ಷ ಅಧಿಕಾರ ನಡೆಸಿದ್ದಾರೆ. ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯದಲ್ಲಿ ಪರಿವರ್ತನೆ, ಅಧಿಕಾರದಲ್ಲಿ ಪರಿವರ್ತನೆ ಅಲ್ಲದೇ, ದೇಶದ ಪರಿವರ್ತನೆಯ ಕೆಲಸ ಮಾಡುತ್ತಿದ್ದಾರೆ. ಪ್ರಕೋಷ್ಠಗಳಿಗೆ ನೇಮಕಗೊಂಡವರು ಅವರಂತೆ ತನ್ಮಯತೆಯಿಂದ ಮತ್ತು ಬದ್ಧತೆಯಿಂದ ಕೆಲಸ ಮಾಡಿ ಕರ್ತವ್ಯದಲ್ಲಿ ಯಶಸ್ವಿಯಾಗಬೇಕು. ನಾವು ಇನ್ನು ಮೂರು ವರ್ಷ ಇದನ್ನು ನೆನಪಿನಲ್ಲಿಡಬೇಕು ಎಂದು ತಿಳಿಸಿದರು.
2014ಕ್ಕೂ ಮುಂಚೆ ರಾಜಕಾರಣಿಗಳು ಎಂದರೆ ಸುಳ್ಳುಗಾರರು, ಪಟಿಂಗರು, ರಾಜಕಾರಣಕ್ಕೆ ಬರುವುದೇ ತಪ್ಪು ಎಂಬ ಭಾವನೆ ಇತ್ತು. 2014ರಲ್ಲಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಈಗ ಸಣ್ಣ ಮಗುವನ್ನು ಕೇಳಿದರೂ ನಾನು ನರೇಂದ್ರ ಮೋದಿ ಅವರ ಪಕ್ಷ ಸೇರುತ್ತೇನೆ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಹಿಂದಿನ ಪ್ರಧಾನಿಗಳು ಭಾರತವನ್ನು ಅಮೆರಿಕ, ಜಪಾನ್ ಮಾಡುವ ಕನಸು ಕಾಣುತ್ತಿದ್ದರು. ಈಚೆಗೆ ಅಮೆರಿಕದ ಚುನಾವಣೆ ನಡೆದಾಗ ಅಲ್ಲಿನ ಅಧ್ಯಕ್ಷೀಯ ಅಭ್ಯರ್ಥಿ ಅಮೆರಿಕಾ ದೇಶವನ್ನು ಭಾರತದಂತೆ "ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ಮಾಡುವುದಾಗಿ ಹೇಳಿದ್ದರು. ಮೋದಿ ಅವರು ಪ್ರಧಾನಿಗಳಾದ ಬಳಿಕ ವಿಶ್ವದ ಇತರ ಎಲ್ಲಾ ದೇಶಗಳು ಭಾರತವನ್ನು ವಿಶ್ವಗುರುವಿನಂತೆ ನೋಡುವ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಚಾಲಕ ಭಾನುಪ್ರಕಾಶ್ ಅವರು ಮಾತನಾಡಿ, 24 ಪ್ರಕೋಷ್ಠಗಳ 264 ಜನ ಅಪೇಕ್ಷಿತರಲ್ಲಿ 200 ಜನರು ಭಾಗವಹಿಸುತ್ತಿದ್ದಾರೆ ಎಂದರು. ಪುಲ್ವಾಮಾ ಘಟನೆಯ ಕುರಿತು ಪಾಕಿಸ್ಥಾನದ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಅಲ್ಲಿನ ಶೇಕಡಾ 30ರಷ್ಟು ಸಂಸದರು "ಮೋದಿ ಮೋದಿ" ಎಂದು ಘೋಷಣೆ ಕೂಗಿದ್ದರು ಎಂದು ನೆನಪಿಸಿದರು.