ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ ಮಹತ್ವ, ಲಾಭ ಸೇರಿದಂತೆ ಎಲ್ಲವನ್ನೂ ಎಲ್ಲರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು. ರಾಜ್ಯದ ಗ್ರಾಮ, ಗ್ರಾಮಗಳಿಗೆ ತೆರಳಿ ಈ ವಿಚಾರಧಾರೆಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಕಟೀಲ್, ನಾನು ಮೂರು ಬಾರಿ ಸಂಸದನಾಗಿ ಆಯ್ಕೆ ಆಗಿದ್ದೇನೆ. ಸಂವಿಧಾನದ 370ನೇ ವಿಧಿ ರದ್ದು, ರಾಮ ಮಂದಿರ ನಿರ್ಮಾಣ, ಎನ್ಆರ್ಸಿ ಈ ಮೂರು ವಿಚಾರಗಳಿಗೆ ನಮ್ಮ ಪರವಾಗಿ ಜನ ಮತದಾನ ಮಾಡಿರೋದಕ್ಕೆ ಹೆಮ್ಮೆ ಆಗುತ್ತೆ. ಆದ್ರೆ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಾಗಲೆಲ್ಲಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಆರೋಪಿಸಿದರು.
ಪಾಕಿಸ್ತಾನವನ್ನ ತುಂಡು ಮಾಡಿ ಇಬ್ಬಾಗ ಮಾಡಿದ್ದೇ ಇವತ್ತಿನ ಎಲ್ಲಾ ಹೋರಾಟಕ್ಕೆ ಕಾರಣ. ಭಾರತದಲ್ಲಿ ಪ್ರಮುಖ ಸಾಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ, ಸ್ಪೀಕರ್, ಮುಖ್ಯಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಭಾರತ ನೀಡಿದೆ. ಆಗ ಯಾರೊಬ್ಬ ಬಹುಸಂಖ್ಯಾತರೂ ಕೂಡಾ ವಿರೋಧ ವ್ಯಕ್ತಪಡಿಸಿಲ್ಲ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿ ಬಂದ್ರು, ಸಿಐಡಿ ತನಿಖೆಗೆ ಆದೇಶಿಸಿದರು, ಆದರೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಜೆಡಿಎಸ್ ನಾಯಕರು ಆಗ್ರಹಿಸಿದರು. ಇದೆಲ್ಲದಕ್ಕೂ ಮಿಗಿಲಾಗಿ ಇವತ್ತು ಎಲ್ಲವೂ ಬಯಲಾಗಿದೆ. ಘಟನೆಗೆ ಕಾರಣ ಏನು ಅನ್ನೋದು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್ ನಾಯಕರ ಕುತಂತ್ರವೇ ಕಾರಣ. ಕಾಂಗ್ರೆಸ್, ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕು, ಮುಸ್ಲೀಮರ ಮತವನ್ನ ಪಡೆಯಬೇಕು ಎಂದು ಈ ರೀತಿ ಮಾಡ್ತಿದೆ ಎಂದು ಆರೋಪಿಸಿದರು.