ಬೆಂಗಳೂರು: ಇವತ್ತು ಪ್ರಥಮ ಬಾರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಡಿಸಿಗಳ ಪ್ರತ್ಯೇಕ ಸಭೆ ಮಾಡ್ತಿದ್ದೇನೆ. ಸಿಇಒ ವ್ಯಾಪ್ತಿಗೆ ಬರುವಂತಹ ಆಡಳಿತ ನಿರ್ವಹಣೆ ಹಾಗೂ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ತೀನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧಕ್ಕೆ ತೆರಳುವ ಮುನ್ನ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಎರಡರ ಪ್ರತ್ಯೇಕ ಅಭಿವೃದ್ಧಿ ಸಂಬಂಧಪಟ್ಟಂತೆ ಸೂಚನೆ ಕೊಟ್ಟಿದ್ದೇನೆ. ಯಾವ ಯಾವ ಯೋಜನೆಯಲ್ಲಿ ಎಷ್ಟೆಷ್ಟು ಸಾಧನೆಯಾಗಿದೆ ಎಂಬುದರ ನಿಖರತೆಯ ಅಧಾರದ ಮೇಲೆ ಪರಿಶೀಲನೆ ಆಗಲಿದೆ. ಈ ಬಗ್ಗೆ ಪಟ್ಟಿ ರೆಡಿ ಮಾಡಿಕೊಳ್ಳಲು ಹೇಳಿದ್ದೇನೆ. ನಾಳೆ ಡಿಸಿಗಳ ಸಭೆ ಮಾಡ್ತೀನಿ. ಆಡಳಿತ ನಿರ್ವಹಣೆ ವ್ಯಾಪ್ತಿಯಲ್ಲಿ ಬರುವಂತೆ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದರು.
ಇದೊಂದು ಮಹತ್ವದ ಘಟ್ಟ. ಮುಂದಿನ ಮೂರು ತಿಂಗಳಲ್ಲಿ ಎಷ್ಟರ ಮಟ್ಟಿಗೆ ಮುಟ್ಟುತ್ತೇವೆ, ಮುಂದಿನ ವರ್ಷಕ್ಕೆ ಯಾವ ರೀತಿ ತಯಾರಿ ನಡೆಸಬೇಕು ಎಂಬ ಬಗ್ಗೆ ಅನುಕೂಲವಾಗಲಿದೆ. ಈಗಿರುವ ಕಾರ್ಯಕ್ರಮಕ್ಕೆ ಚುರುಕು ಹಾಗೂ ಹೊಸ ಕಾರ್ಯಕ್ರಮಗಳ ಯೋಜನೆ ಬಗ್ಗೆ ಚರ್ಚೆ ನಡೆಯಲಿದೆ. ಬಜೆಟ್ನಲ್ಲಿ ಹೊಸ ಕಾರ್ಯಕ್ರಮ ಸೂಚಿಸಲು ಅನುಕೂಲವಾಗಲಿದೆ ಎಂದರು.

ಬಂದ್ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ಕರವೇ ಪ್ರವೀಣ್ ಶೆಟ್ಟಿ ಬಂದು ಭೇಟಿ ಮಾಡಿದ್ದಾರೆ. ಬಂದ್ಗೆ ನಾವು ಕರೆ ಕೊಡೋದಿಲ್ಲ ಎಂದು ಹೇಳಿದ್ದಾರೆ. ಬಂದ್ನಿಂದ ರಾಜ್ಯದ ಜನರಿಗೆ ತೊಂದರೆ ಆಗಲಿದೆ. ನಾನು ನಮ್ಮ ಹಿರಿಯ ಹೋರಾಟಗಾರದ ವಾಟಾಳ್ ನಾಗರಾಜ್ರಿಗೆ ಬಂದ್ ಕೈಬಿಡಿ ಎಂದು ಮನವಿ ಮಾಡ್ತೀನಿ. ಕೊರೊನಾ ಆರ್ಥಿಕ ಹೊಡೆತದಿಂದ ಹಾಗೂ ಜನಸಾಮಾನ್ಯರ ಹಿತದಿಂದ ಬಂದ್ ವಾಪಸ್ ಪಡೆಯುವಂತೆ ಮನವಿ ಮಾಡ್ತೀನಿ ಎಂದು ಹೇಳಿದರು.
ಬಿಜೆಪಿ ನಾಯಕಿ ಖುಷ್ಬೂ ಭೇಟಿ: ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕಿ ಖುಷ್ಬೂ ಸಿಎಂ ಭೇಟಿ ಮಾಡಿ ಚರ್ಚಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಖುಷ್ಬೂ, ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತ ಮಾಡುತ್ತಿರುವುದಕ್ಕೆ ಸ್ವಾಗತವಿದೆ. ತಮಿಳುನಾಡಿನಲ್ಲೂ ಈ ಒತ್ತಾಯವಿದೆ. ತಮಿಳುನಾಡು ಸರ್ಕಾರದ ನಡೆ ಏನಿರುತ್ತೆ ಅಂತ ನಾವು ಕಾದು ನೋಡ್ತಿದ್ದೇವೆ. ತಮಿಳುನಾಡಿನಲ್ಲೂ ಚುನಾವಣೆ ವೇಳೆ ದೇವಸ್ಥಾನಗಳನ್ನು ಮುಕ್ತಗೊಳಿಸುವ ಭರವಸೆ ಕೊಡಲಾಗಿತ್ತು ಎಂದು ಹೇಳಿದರು.

ಪ್ರಧಾನಿ ನೇತೃತ್ವದ ಪೋಷಣ್ ಅಭಿಯಾನದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಸ್ವಸ್ಥ ಬಾಲಕ್, ಸ್ವಸ್ಥ ಬಾಲಿಕಾ ಸ್ಪರ್ಧೆ ಇದೆ. ಅಪೌಷ್ಟಿಕತೆಯುಳ್ಳ 0-6 ವರ್ಷದ ಮಕ್ಕಳನ್ನು ದೇಶಾದ್ಯಂತ ಪತ್ತೆ ಮಾಡಲಾಗ್ತಿದೆ. ಆಶಾವಾಡಿ, ಅಂಗನವಾಡಿಗಳಲ್ಲಿ ಈ ಮಕ್ಕಳ ನೋಂದಣಿ ಮಾಡುವ ಕಾರ್ಯ ನಡೀತಿದೆ. ಈ ಅಭಿಯಾನವನ್ನು ಕರ್ನಾಟಕ ರಾಜ್ಯದಲ್ಲಿ ಕೈಗೊಳ್ಳುವ ಬಗ್ಗೆ ಸಿಎಂ ಬೊಮ್ಮಾಯಿ ಜತೆ ಇವತ್ತು ಚರ್ಚೆ ನಡೆಸಿದ್ದೇನೆ ಎಂದು ಬಿಜೆಪಿ ನಾಯಕಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಒಗಳ ಸಭೆ:
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸಿಇಒಗಳ ಸಮ್ಮೇಳನ ಆರಂಭವಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆರಂಭವಾಗಿರುವ ಈ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಸಿ.ಸಿ.ಪಾಟೀಲ್ ಹಾಗೂ ವಿ. ಸೋಮಣ್ಣ, ಸುನಿಲ್ ಕುಮಾರ್, ಗೋಪಾಲಯ್ಯ ಉಪಸ್ಥಿತರಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಜಿಲ್ಲಾ ಪಂಚಾಯತ್ ಸಿಇಒಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಜಿಲ್ಲಾ ಪಂಚಾಯಿತಿವಾರು ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುವ, ಜಿಲ್ಲಾವಾರು ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಆರಂಭಿಸುವ, ಜಿಲ್ಲಾ ಪಂಚಾಯತಿವಾರು ಅನುದಾನ ಹಂಚಿಕೆ, ಅತಿವೃಷ್ಟಿಯಿಂದ ಉಂಟಾಗಿರುವ ಮೂಲಭೂತ ಸೌಕರ್ಯಗಳ ಪುನರ್ನಿರ್ಮಾಣ, ಅತಿವೃಷ್ಟಿ ಸಂದರ್ಭದಲ್ಲಿ ಉಂಟಾದ ರಸ್ತೆ, ಸೇತುವೆ ಹಾಗೂ ಇತರೆ ನಷ್ಟಗಳ ಮಾಹಿತಿ ಸಂಗ್ರಹ ಹಾಗೂ ಅದನ್ನು ಪುನರ್ನಿರ್ಮಾಣ ಗೊಳಿಸುವ ಕುರಿತು ಚರ್ಚಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಚರ್ಚಿಸಲಿರುವ ಮುಖ್ಯಮಂತ್ರಿ, ಜಿಲ್ಲಾವಾರು ವಸತಿ ಯೋಜನೆಗಳು ಹಾಗೂ ಅತಿವೃಷ್ಟಿ ಸಂದರ್ಭ ಹಾನಿಗೊಳಗಾಗಿರುವ ಮನೆಗಳ ಮಾಹಿತಿ ಸಹ ಸಂಗ್ರಹಿಸಲಿದ್ದಾರೆ.
ಕೋವಿಡ್, ಒಮಿಕ್ರಾನ್ ಕಾರಣದಿಂದ ಅಭಿವೃದ್ದಿ ಕೆಲಸ ಕಾರ್ಯಗಳೂ ಹಿನ್ನಡೆಯಾಗಿವೆ. ಸರ್ಕಾರದ ಯೋಜನೆಗಳು ಜಿಲ್ಲಾ ಮಟ್ಟದಲ್ಲಿ ಸೂಕ್ತ ರೀತಿಯಲ್ಲಿ ಕಾರ್ಯಗತಗೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಸಿಎಂ ಸಿಇಒಗಳು ಹಾಗೂ ಡಿಸಿಗಳ ಜೊತೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆ
ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರು ನೀಡಿರುವ ಸೂಚನೆಯ ಭಾಗವಾಗಿಯೂ ಇಂದು ಮಹತ್ವದ ಸಭೆ ನಡೆಯುತ್ತಿದೆ.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ಸಿಎಂ ಬೊಮ್ಮಾಯಿ ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಮಾತ್ರ ಬಾಕಿ ಇದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಮಾಡಲು ಅಗತ್ಯವಿರುವ ಕ್ರಮವನ್ನು ಹಾಗೂ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.