ಬೆಂಗಳೂರು: ಗಣೇಶ ವಿಗ್ರಹಗಳ ಮಾರಾಟಕ್ಕೆ ಬೆಂಗಳೂರು ನಗರ ಹೆಸರುವಾಸಿ. ಅದರಲ್ಲೂ ಗಣೇಶ ಚತುರ್ಥಿ ಸಂದರ್ಭದಲ್ಲಿ ಇಲ್ಲಿನ ಆರ್ವಿ ರಸ್ತೆಯು ಮೂರ್ತಿಗಳಿಗೆ ಅತ್ಯಂತ ಜನಪ್ರಿಯ ತಾಣವಾಗಿದೆ. ಮಹಾನಗರದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ವಿಗ್ರಹ ಕೊಂಡುಕೊಳ್ಳಲು ಆರ್ವಿ ರಸ್ತೆಗೆ ಜನರು ಬರುತ್ತಾರೆ.
ಕಳೆದ ಎರಡು ವರ್ಷಗಳಿಂದ ವ್ಯಾಪಾರವೇ ಇಲ್ಲದೆ ಕಂಗೆಟ್ಟಿದ್ದ ವರ್ತಕರು ಈ ಸಲ ಹೆಚ್ಚಿನ ಮೂರ್ತಿಗಳು ಮಾರಾಟವಾಗುವ ನಿರೀಕ್ಷೆಯಲ್ಲಿದ್ದಾರೆ. ಮಾರಾಟಗಾರರು ಹಾಗೂ ಕೊಳ್ಳುವವರ ನಡುವಿನ ಕೊಂಡಿಯಾಗಿ ಆರ್ವಿ ರಸ್ತೆ ಕಳೆದ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಪ್ರತಿವರ್ಷ 50 ರೂಪಾಯಿಯಿಂದ ಆರಂಭಗೊಂಡು 5 ಲಕ್ಷಕ್ಕೂ ಹೆಚ್ಚು ಮೊತ್ತದ ಗಣೇಶ ಮೂರ್ತಿಗಳೂ ಕೂಡ ಮಾರಾಟವಾಗುತ್ತವೆ.
![bengaluru-rv-road-is-famous-for-ganesha-idol](https://etvbharatimages.akamaized.net/etvbharat/prod-images/kn-bng-03-r-v-road-ganesha-story-script-7208077_27082022162540_2708f_1661597740_132.jpg)
ಅಲ್ಲದೆ, ಅರ್ಧ ಅಡಿಯಿಂದ 10 ಅಡಿಗೂ ಹೆಚ್ಚು ಎತ್ತರದ ವಿಘ್ನವಿನಾಶಕನ ಮೂರ್ತಿಗಳು ಇಲ್ಲಿ ಸಿಗುತ್ತವೆ. 5ರಿಂದ 6 ಮಂದಿ ವರ್ತಕರು ಮೂರ್ತಿ ಮಾರಾಟದಲ್ಲಿ ತೊಡಗಿದ್ದಾರೆ. ವಂಶ ಪಾರಂಪರ್ಯವಾಗಿ ಇದೇ ವ್ಯವಹಾರ ನಡೆಸಿಕೊಂಡು ಬಂದಿರುವ ಕುಟುಂಬಗಳು ಇಲ್ಲಿವೆ. ಶೇ. 70ರಷ್ಟು ಮೂರ್ತಿಗಳನ್ನು ಬೇರೆಡೆ ತಯಾರಿಸಿ ಇಲ್ಲಿಗೆ ತಂದು ಮಾರಾಟ ಮಾಡಲಾಗುತ್ತದೆ. ಉಳಿದ 30ರಷ್ಟು ಮೂರ್ತಿಗಳನ್ನು ಗ್ರಾಹಕರ ಆಶಯಕ್ಕೆ ತಕ್ಕಂತೆ ಇಲ್ಲಿಯೇ ಸಿದ್ಧಪಡಿಸುತ್ತಾರೆ. ಜೇಡಿ ಮಣ್ಣಿನಿಂದ ತಯಾರಿಸಿದ ಚಿಕ್ಕ ಮೂರ್ತಿಗಳು ಹಾಗೂ ಪಿಒಪಿಯಿಂದ ಸಿದ್ಧಗೊಂಡ ಬೃಹತ್ ಮೂರ್ತಿಗಳೂ ಇಲ್ಲಿ ಮಾರಾಟಕ್ಕಿವೆ.
![bengaluru-rv-road-is-famous-for-ganesha-idol](https://etvbharatimages.akamaized.net/etvbharat/prod-images/kn-bng-03-r-v-road-ganesha-story-script-7208077_27082022162540_2708f_1661597740_178.jpg)
ಕೋವಿಡ್ಗೂ ಮುನ್ನ ಒಂದು ಲೋಡ್ ಜೇಡಿಮಣ್ಣಿಗೆ 20ರಿಂದ 25 ಸಾವಿರ ರೂ. ಇತ್ತು. ಆದರೀಗ 40ರಿಂದ 80 ಸಾವಿರ ರೂ.ವರೆಗೆ ಏರಿಕೆಯಾಗಿದೆ. ಮೂರ್ತಿ ತಯಾರಿಸಲು ಕೆರೆಗಳಲ್ಲಿ ಸಿಗುವ ಒಳ್ಳೆಯ ಜೇಡಿಮಣ್ಣು ಅತ್ಯಗತ್ಯ. ನಗರದ ಆಸುಪಾಸು, ಕೋಲಾರದ ಗಡಿಯಲ್ಲಿ ಅಲ್ಪಸ್ವಲ್ಪ ಸಿಕ್ಕರೆ, ಉಳಿದ ಅಗತ್ಯ ಪ್ರಮಾಣದ ಮಣ್ಣನ್ನು ನೆರೆಯ ತಮಿಳುನಾಡಿನಿಂದ ತರಿಸಲಾಗುತ್ತಿದೆ. ಇದರಿಂದಲೇ ಹೆಚ್ಚಿನ ಗ್ರಾಹಕರು ಪಿಒಪಿ ಗಣೇಶನ ಮೊರೆ ಹೋಗುತ್ತಾರೆ. ಜೇಡಿಮಣ್ಣಿನಿಂದ ತಯಾರಾದ ಬೃಹತ್ ಮೂರ್ತಿಗಳನ್ನು ಸಾಗಿಸುವುದು ಹಾಗೂ ಕೊಂಡುಕೊಳ್ಳುವುದು ಕೂಡ ದುಬಾರಿ ಆಗುತ್ತದೆ ಎಂಬುದು ತಯಾರಕರ ಮಾತಾಗಿದೆ.
ಇದನ್ನೂ ಓದಿ; ಎಲ್ಲಡೆ ಗಣೇಶೋತ್ಸವಕ್ಕೆ ಭರದ ಸಿದ್ಧತೆ.. ಸಂಪ್ರದಾಯಬದ್ಧ ಆಚರಣೆಯಿಂದ ಪ್ರಸನ್ನನಾಗುತ್ತಾನೆ ಗಣಪ
ನಗರದಲ್ಲಿ ಟ್ಯಾನರಿ ರಸ್ತೆಯಂತಹ ಕೆಲವೇ ಪ್ರದೇಶಗಳಲ್ಲಿ ಮಣ್ಣಿನ ಗಣೇಶ ವಿಗ್ರಹಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಉಳಿದಂತೆ ಶಿವಾಜಿನಗರ, ಬಾಣಸವಾಡಿ, ಮಲ್ಲೇಶ್ವರ, ಬಸವನಗುಡಿ, ಗಾಂಧಿಬಜಾರ್ ಮತ್ತಿತರೆಡೆ ಗೌರಿ, ಗಣೇಶನ ಮೂರ್ತಿಗಳನ್ನು ಸಣ್ಣಮಟ್ಟದಲ್ಲಿ ಸಿಗುತ್ತವೆ. ದೊಡ್ಡ ದೊಡ್ಡ ಮೂರ್ತಿಗಳ ಮಾರಾಟಗಾರರು ಕೃಷ್ಣಗಿರಿಯಿಂದ ಬಲ್ಕ್ ಆರ್ಡ್ ಕೊಟ್ಟು ತರುತ್ತಿದ್ದಾರೆ. ಆದರೂ ಆರ್ವಿ ರಸ್ತೆಯ ಮಟ್ಟಕ್ಕೆ ಯಾವ ಭಾಗವೂ ಜನಪ್ರಿಯತೆ ಗಳಿಸಿಲ್ಲ.
'ಕಳೆದ ಎರಡು ವರ್ಷ ಗಣೇಶನ ಹಬ್ಬ ಅಷ್ಟೊಂದು ಅದ್ಧೂರಿಯಾಗಿ ನಡೆದಿಲ್ಲ. ಈ ವರ್ಷ ಕೆಲ ಗ್ರಾಹಕರು ಮೂರ್ತಿ ಕೊಂಡುಕೊಳ್ಳಲು ಆಗಮಿಸುತ್ತಿದ್ದಾರೆ. ಜನರ ಬಳಿ ಅಷ್ಟಾಗಿ ಹಣವಿಲ್ಲದ ಕಾರಣ ಚೌಕಾಸಿ ಹೆಚ್ಚಾಗಿ ನಡೆಯುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆರ್ವಿ ರಸ್ತೆಯಲ್ಲಿ ಮೊದಲಿನಷ್ಟು ವ್ಯಾಪಾರವಿಲ್ಲ. ಜನರು ವಿಶಿಷ್ಟ ಆಯ್ಕೆಯನ್ನೂ ಈಗ ಪರಿಗಣಿಸುತ್ತಿಲ್ಲ. ತಮ್ಮ ಊರು ಹಾಗೂ ಸಮೀಪದ ಪಟ್ಟಣದಲ್ಲಿ ಸಿಗುವ ಗಣೇಶನ ಮೂರ್ತಿಗಳನ್ನೇ ಕೊಳ್ಳುತ್ತಿದ್ದಾರೆ. ಎರಡು ವರ್ಷಗಳ ಬಳಿಕ ಈ ವರ್ಷವಾದರೂ ಉತ್ತಮ ವ್ಯಾಪಾರದ ನಿರೀಕ್ಷೆ ಹೊಂದಿದ್ದೇವೆ' ಎಂದು ವ್ಯಾಪಾರಿ ಆರ್. ಗೌರವ್ ಹೇಳುತ್ತಾರೆ.
ಇದನ್ನೂ ಓದಿ; ಎರಡು ವರ್ಷಗಳ ನಂತರ ತಲೆ ಎತ್ತುತ್ತಿರುವ ಗಣೇಶನ ದೊಡ್ಡ ಮೂರ್ತಿಗಳು.. ಶಿರಸಿಯಲ್ಲಿ ಚೌತಿ ತಯಾರಿ