ಬೆಂಗಳೂರು : ರಾಜ್ಯದಲ್ಲಿ ಆಜಾನ್-ಸುಪ್ರಭಾತ ವಿವಾದ ಹಿನ್ನೆಲೆಯಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಸರ್ಕಾರವು ಮಾರ್ಗಸೂಚಿ ಹೊರಡಿಸಿದೆ. ಈ ಬೆನ್ನಲ್ಲೇ ನಗರದಲ್ಲಿ ಧ್ವನಿವರ್ಧಕ ಬಳಸಬೇಕಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ನಗರ ಪೊಲೀಸ್ ಆಯುಕ್ತದ ಕಮಲ್ ಪಂತ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ ವೇಳೆ ಲೌಡ್ ಸ್ಪೀಕರ್ ಬಳಕೆಗೆ ಅನುಮತಿಯಿಲ್ಲ. ನಿತ್ಯ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕಡ್ಡಾಯವಾಗಿದೆ. ಸರ್ಕಾರ ಈ ಹಿಂದೆಯೇ ಲೌಡ್ ಸ್ಪೀಕರ್ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಗೊಂದಲವಿಲ್ಲ. ಎಲ್ಲರೂ ಆದೇಶ ಪಾಲನೆ ಮಾಡುತ್ತಿದ್ದಾರೆ ಎಂದರು.
ಈ ಕುರಿತು 2002ರಲ್ಲೇ ಆದೇಶವಾಗಿದೆ. ರಾತ್ರಿ 10ರಿಂದ ಮುಂಜಾನೆ 6 ಗಂಟೆಯ ತನಕ ಯಾವುದೇ ಲೌಡ್ ಸ್ಪೀಕರ್ ಬಳಸಲು ಅವಕಾಶ ಇಲ್ಲ. ವಿಶೇಷ ಸಮಯದಲ್ಲಿ ಅವಕಾಶವಿದೆ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಡಿಸೆಬಲ್ ಲಿಮಿಟ್ಸ್ ಅನುಮೋದಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.
ಸದ್ಯ ಈಗಿರುವ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯವಾಗಿದೆ. ಅನುಮತಿ ಪಡೆಯಲು ಎಲ್ಲಾ ಮಸೀದಿ, ಮಂದಿರಗಳಿಗೂ 15 ದಿನಗಳ ಗಡುವು ನೀಡಲಾಗಿದೆ. 15 ದಿನದ ಒಳಗಡೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅನುಮತಿ ಪಡೆಯದಿದ್ದರೆ ಕ್ರಮಕೈಗೊಳ್ಳಲಾಗುವುದು. ಆಜಾನ್ ವಿಚಾರವಾಗಿ ಈವರೆಗೂ ಎಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದರು.
ಇದನ್ನೂ ಓದಿ: ಸಂಪುಟ ಸರ್ಕಸ್.. ಸಿಎಂ-ಶಾ ಭೇಟಿ ಅಂತ್ಯ, ಬರಿಗೈಯಲ್ಲೇ ರಾಜ್ಯಕ್ಕೆ ಬೊಮ್ಮಾಯಿ ವಾಪಸ್