ಬೆಂಗಳೂರು: 5ನೇ ದಿನಕ್ಕೆ ಕಾಲಿಟ್ಟ ವಿಧಾನಸಭೆ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದ್ದು, ಇದರಲ್ಲಿ ಪಾಲ್ಗೊಂಡು ಸರ್ಕಾರದ ಲೋಪವನ್ನು ಎತ್ತಿ ಹಿಡಿಯಲು ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿದೆ.
ಇಂದು ಉಭಯ ಸದನಗಳಲ್ಲಿ ಬಜೆಟ್ ಭಾಷಣದ ಮೇಲೆ ಚರ್ಚೆ ಆರಂಭವಾಗಲಿದೆ. ಚರ್ಚೆ ವೇಳೆ ಹಲವು ವಿಚಾರ ಪ್ರಸ್ತಾಪ ಮಾಡುವ ಮೂಲಕ ರಾಜ್ಯದ ಜ್ವಲಂತ ಸಮಸ್ಯೆ ಬಿಚ್ಚಿಡಲು ಕಾಂಗ್ರೆಸ್ ನಿರ್ಧರಿಸಿದೆ. ಬಜೆಟ್ನಲ್ಲಿ ಯಾವುದಕ್ಕೂ ಸರಿಯಾಗಿ ಒತ್ತು ನೀಡಿಲ್ಲ. ರೈತರು, ಕಾರ್ಮಿಕರಿಗೆ ನ್ಯಾಯ ಕೊಟ್ಟಿಲ್ಲ. ಸಾಲ ಮಾಡಿ ಬಜೆಟ್ ಮಂಡಿಸುವ ಅವಶ್ಯಕತೆಯಿತ್ತೇ? ಸಾಲ ಮಾಡಿ ರಾಜ್ಯವನ್ನ ದಿವಾಳಿಯತ್ತ ಸಾಗಿಸುತ್ತಿದ್ದೀರಿ ಎಂಬ ಆರೋಪವನ್ನ ಮುಂದಿಟ್ಟು ಸರ್ಕಾರಕ್ಕೆ ಮುಜುಗರ ತರಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಸಮರ್ಥವಾಗಿ ಚರ್ಚಿಸುವ ಮೂಲಕ ಸರ್ಕಾರದ ಲೋಪವನ್ನು ಎತ್ತಿ ಹಿಡಿದು ವಿಧಾನಸಭೆ ವಿಧಾನ ಪರಿಷತ್ನಲ್ಲಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಮಾ.8ರಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ವಿಚಾರ ಗಂಭೀರವಾಗಿ ಚರ್ಚೆಯಾಗಿದೆ. ಅಲ್ಲಿಯೇ ಬಹುತೇಕ ವಿಚಾರ ಅಂತಿಮವಾಗಿದ್ದು ಇದಾದ ಬಳಿಕ ನಿನ್ನೆ ಸಿದ್ದರಾಮಯ್ಯ ಪಕ್ಷದ ಶಾಸಕರು ವಿಧಾನಪರಿಷತ್ ಸದಸ್ಯರಿಗೆ ಪಕ್ಷದ ಸೂಚನೆಯನ್ನು ರವಾನೆ ಮಾಡಿದ್ದಾರೆ ಎನ್ನಲಾಗ್ತಿದೆ.
ವಿವಿಧ ವಿಚಾರ ಪ್ರಸ್ತಾಪ:
ಸಂಗಮೇಶ್ ವಿಚಾರದ ಬಗ್ಗೆಯೂ ಮತ್ತೆ ಪ್ರಸ್ತಾಪ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ. ಚರ್ಚೆ ವೇಳೆ ಸಿದ್ದರಾಮಯ್ಯ ಅವರು ರಮೇಶ್ ಜಾರಕಿಹೊಳಿ ಸಿಡಿ ವಿಚಾರವೂ ಪ್ರಸ್ತಾಪ ಮಾಡಲು ನಿರ್ಧರಿಸಿದ್ದಾರೆ. 6 ಸಚಿವರು ಕೋರ್ಟ್ ಮೆಟ್ಟಿಲೇರಿದ ಬಗ್ಗೆಯೂ ಧ್ವನಿ ಎತ್ತುವ ಮೂಲಕ ಸಮಗ್ರವಾಗಿ ರಾಜ್ಯ ಸರ್ಕಾರದ ನಿಲುವುಗಳನ್ನು ಖಂಡಿಸುವ ಹಾಗೂ ಸರ್ಕಾರವನ್ನ ಕಟ್ಟಿಹಾಕುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ.
ಅವಕಾಶ ನೋಡಿ ಈ ವಿಷಯಗಳ ಪ್ರಸ್ತಾಪಕ್ಕೆ ನಿರ್ಧಾರ ಮಾಡಲಾಗಿದ್ದು, ಪ್ರವಾಹ ಸಂತ್ರಸ್ತರ ಸಮಸ್ಯೆ, ಕೋವಿಡ್ ಭ್ರಷ್ಟಾಚಾರ, ಜನ ಸಾಮಾನ್ಯರ ಮೇಲಿನ ತೆರಿಗೆ ಹೇರಿಕೆ ಬಗ್ಗೆಗೂ ಧ್ವನಿ ಎತ್ತುವ ಮೂಲಕ ಸರ್ಕಾರವನ್ನು ಶಕ್ತಿ ಕೇಂದ್ರದಲ್ಲಿ ದುರ್ಬಲಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲು ತೀರ್ಮಾನಿಸಿದೆ.
ಓದಿ: ರೈತರಿಗೆ ನೀಡುತ್ತಿರುವ ತ್ರಿಫೇಸ್ ವಿದ್ಯುತ್ ಸಮಯ ಹೆಚ್ಚಿಸಬೇಕು: ಬಂಡೆಪ್ಪ ಕಾಶೆಂಪೂರ್