ಬೆಳಗಾವಿ: ಬಿಜೆಪಿ ಸರ್ಕಾರ ಈಗಾಗಲೇ ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡಿದೆ. ಆ ಮೂಲಕ ಬಲವಂತದ ಮತಾಂತರಕ್ಕೆ ನಿಯಂತ್ರಣ ಹೇರಲು ಮುಂದಾಗಿದೆ. ಇತ್ತ ಕ್ರಿಷ್ಚಿಯನ್ ಸಮುದಾಯದವರು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಅಷ್ಟಕ್ಕೂ ರಾಜ್ಯದಲ್ಲಿನ ಮತಾಂತರ ಸಂಬಂಧ ಇರುವ ವಿರೋಧಾಭಾಸಗಳು ಏನು ಎಂಬ ವರದಿ ಇಲ್ಲಿದೆ.
ಬಿಜೆಪಿ ಸರ್ಕಾರ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಒಂದೆಡೆ ಪ್ರತಿಪಕ್ಷಗಳ ಪ್ರತರೋಧ ಮತ್ತೊಂದೆಡೆ ಕೈಸ್ತ ಸಮುದಾಯದವರ ವಿರೋಧ. ಈ ಮಧ್ಯೆ ಬಿಜೆಪಿ ಸರ್ಕಾರ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಿದೆ. ರಾಜ್ಯದಲ್ಲಿ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿದೆ. ಆಸೆ, ಆಮಿಷಗಳನ್ನು ಒಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬುದು ಬಿಜೆಪಿಯ ಆರೋಪ. ಅದರಲ್ಲೂ ಎಸ್ಸಿ, ಎಸ್ಟಿ, ವಿಕಲಾಂಗರು, ದುರ್ಬಲರನ್ನು ಗುರಿಯಾಗಿಸಿ ಮತಾಂತರ ಮಾಡಲಾಗುತ್ತಿದೆ. ಅವರಿಗೆ ಆಸೆ, ಆಮಿಷಗಳನ್ನು ಒಡ್ಡಲಾಗುತ್ತಿದೆ. ಆ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಅನಧಿಕೃತ ಮಿಷನರಿ, ಚರ್ಚ್ಗಳು ಬಲವಂತವಾಗಿ ಮತಾಂತರ ಮಾಡುತ್ತಿವೆ ಎಂಬುದು ಬಿಜೆಪಿ ನಾಯಕರ ಆರೋಪ.
ಈವರೆಗೆ ದಾಖಲಾದ ಪ್ರಕರಣಗಳು ಏನು?: ಬಲವಂತದ ಮತಾಂತರದ ಪ್ರಕರಣಗಳು ಹೆಚ್ಚುತ್ತಲೇ ಇದೆ ಎಂಬುದು ಬಿಜೆಪಿ ಸರ್ಕಾರದ ಆರೋಪ. ಆದರೆ, ರಾಜ್ಯ ಗೃಹ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ರಾಜ್ಯದಲ್ಲಿ ಈವರೆಗೆ ಸುಮಾರು 36 ಮತಾಂತರ ಪ್ರಕರಣಗಳು ದಾಖಲಾಗಿವೆ.
ಆದರೆ ಇದ್ಯಾವುದೂ ಇನ್ನೂ ಸಾಬೀತಾಗಿಲ್ಲ. ಬಹುತೇಕ ಪ್ರಕರಣಗಳು ಮುನ್ನಲೆಗೆ ಬರುವುದಿಲ್ಲ. ಈ ಸಂಬಂಧ ದೂರು ಕೊಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಮತಾಂತರ ಪ್ರಕರಣಗಳು ದಾಖಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಕಾಯ್ದೆ ಬಂದ ಬಳಿಕ ಮತಾಂತರ ಪ್ರಕರಣಗಳು ಹೆಚ್ಚಿಗೆ ದಾಖಲಾಗಲಿವೆ. ಹೆಚ್ಚಿನ ದೂರುಗಳನ್ನು ಕೊಡಲು ಜನರು ಮುಂದೆ ಬರುವ ಸಾಧ್ಯತೆ ಇದೆ ಎಂಬುದು ಸರ್ಕಾರದ ವಾದ.
ಕ್ರೈಸ್ತ ಸಮುದಾಯದ ಪ್ರಮುಖ ವಾದ ಏನು?: ಮತಾತಂತರ ನಿಷೇಧ ವಿಧೇಯಕಕ್ಕೆ ಕ್ರೈಸ್ತ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿಸುತ್ತಿದೆ. ನಾವು ಯಾರೂ ಬಲವಂತದ ಮತಾಂತರಗಳನ್ನು ಮಾಡುತ್ತಿಲ್ಲ ಎಂಬುದು ಕ್ರೈಸ್ತ ಸಮುದಾಯದ ವಾದ.
ಅದರ ಜೊತೆಗೆ ನಮ್ಮ ಜನಸಂಖ್ಯೆಯೂ ಕಡಿಮೆಯಾಗುತ್ತಲೇ ಇದೆ. ಮತಾಂತರ ಮಾಡುವುದಾದರೆ ನಮ್ಮ ಜನಸಂಖ್ಯೆಯಲ್ಲಿ ಏರಿಕೆಯಾಗಬೇಕಿತ್ತು. ನಮ್ಮ ಜನಸಂಖ್ಯೆ ಇಳಿಕೆ ಕಾಣುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
2001 ಸೆನ್ಸಸ್ ಪ್ರಕಾರ ರಾಜ್ಯದಲ್ಲಿ ಕ್ರೈಸ್ತರ ಜನಸಂಖ್ಯೆ 1.97% ಇತ್ತು. ಅದೇ 2011ರ ಸೆನ್ಸಸ್ ನಲ್ಲಿ ಜನಸಂಖ್ಯೆ 1.87%ಗೆ ಇಳಿಕೆಯಾಗಿದೆ ಎಂದು ಕ್ರೈಸ್ತ ಸಮುದಾಯದ ಮುಖಂಡರ ಪ್ರಮುಖ ವಾದ. ಅದು ತಮ್ಮ ಬಳಿ ಇರುವ ಅಧಿಕೃತ ಅಂಕಿಅಂಶ. ಸದ್ಯ ನಮ್ಮ ಸಮುದಾಯದ ಜನಸಂಖ್ಯೆಯ ಪ್ರಮಾಣದ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಕ್ರೈಸ್ತ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಹಾಗಾಗಿ ರಾಜಕೀಯ ಉದ್ದೇಶದಿಂದ ಬಿಜೆಪಿ ಸರ್ಕಾರ ಈ ಮತಾಂತರ ನಿಷೇಧ ಕಾಯ್ದೆಯನ್ನು ತರುತ್ತಿದೆ. ಇದರಿಂದ ಕ್ರೈಸ್ತರ ಮೇಲಿನ ದೌರ್ಜನ್ಯ ಹೆಚ್ಚಾಗಲಿದೆ. ಕಾನೂನಿನ ಹೆಸರಲ್ಲಿ ತಮ್ಮ ಸಮುದಾಯದ ಮೇಲೆ ಕಿರುಕುಳ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.