ಬೆಂಗಳೂರು: ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಋಣ ಮುಕ್ತ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ಮುಗಿಬಿದ್ದಿದ್ದು, ಜನರಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ.
ಸಮ್ಮಿಶ್ರ ಸರ್ಕಾರದ ಕೊನೆಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದ ಋಣಮುಕ್ತ ಕಾಯ್ದೆಯ ಲಾಭ ಪಡೆಯಲು ಜನರು ನಾಮುಂದು ತಾಮುಂದು ಎಂದು ತಾಲೂಕು ಕಚೇರಿಗೆ ಮುಗಿಬಿದ್ದಿದ್ದು, ಅಡಮಾನ ಇಟ್ಟು ಪಡೆದಿದ್ದ ಸಾಲದಿಂದ ಮುಕ್ತರಾಗಲು ತುದಿಗಾಲಲ್ಲಿ ನಿಂತಿದ್ದಾರೆ.
ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ 90 ದಿನಗಳ ಗಡುವು ನೀಡಿದ್ದರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅರ್ಜಿ ಸ್ವೀಕರಿಸಲು ಪ್ರಾರಂಭಿಸಿದ್ದು ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ. ಇದರಿಂದ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಇನ್ನು ಕೇವಲ 30 ದಿನಗಳ ದಿನಗಳು ಮಾತ್ರ ಬಾಕಿ ಉಳಿದಿವೆ. ಎಲ್ಲಿ ಸಮಯ ಮೀರುತ್ತೊ ಅನ್ನೋ ಆತಂಕ ಜನರಲ್ಲಿದೆ. ಅರ್ಜಿ ಸಲ್ಲಿಸಲು ಜನರು ತಾಲೂಕು ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದು, ಸಾಲಗಾರರು ನೀಡುವ ಅರ್ಜಿಯನ್ನು ಪಡೆದುಕೊಳ್ಳುವುದಲ್ಲದೇ ಜನರ ಆತುರಕ್ಕೆ ಸ್ಪಂದಿಸುವಷ್ಟರಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ.