ಬಾಗಲಕೋಟೆ: ಜಮಖಂಡಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಗಣೇಶನಿಗೆ ಪೂಜೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಜಮಖಂಡಿ ನಗರದ ಐತಿಹಾಸಿಕ ಪೋಲೋ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಗಣೇಶ ನಿಮಜ್ಜನ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಗಣೇಶನಿಗೆ ಮಂಗಳಾರತಿ ಹಾಗೂ ದೇವರಿಗೆ ನೈವೇದ್ಯ ನೀಡಿ ಪೂಜೆ ಸಲ್ಲಿಸಲಾಯಿತು.
ಪತ್ರಿ ವರ್ಷ ನಡೆಯುವ ಗಣೇಶ ಹಬ್ಬದ ದಿನದಂದು ನಜೀರ ಕಂಗನೊಳ್ಳಿ ಎಂಬುವವರು ತಮ್ಮ ಸಮಾಜದ ಯುವಕರನ್ನು ಕರೆದುಕೊಂಡು ಬಂದು ಪೂಜೆ ಸಲ್ಲಿಸುತ್ತಾರೆ. ಈ ಬಾರಿಯೂ ಎಲ್ಲ ವಿಘ್ನಗಳನ್ನು ದೂರ ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಿಂದೂ - ಮುಸ್ಲಿಂ ಯುವಕರು ಸೇರಿಕೊಂಡು ಗಣೇಶನ ಪೂಜೆ ನೆರವೇರಿಸಿದ್ದಾರೆ.
ಹಿಂದೂ-ಮುಸ್ಲಿಂ ಯುವಕರಿಂದ ಪೂಜೆ:
ಸ್ಥಳೀಯ ಶ್ರೀ ಮಹಾ ಗಜಾನನ ಉತ್ಸವ ಸಮಿತಿಯಿಂದ ಮೂರು ವರ್ಷಗಳಿಂದ ಗಣೇಶ ಪ್ರತಿಷ್ಠಾಪನೆಯನ್ನು ನಡೆಸಿಕೊಂಡು ಬರಲಾಗಿದೆ. ಗಣೇಶ ಪ್ರತಿಷ್ಠಾಪನೆಯಲ್ಲಿ ಪ್ರತಿ ವರ್ಷವೂ ಹಿಂದೂ ಮುಸ್ಲಿಂ ಯುವಕರು ಪಾಲ್ಗೊಂಡು, ಕಾರ್ಯಕ್ರಮ ನೆರವೇರಿಸಿಕೊಡುತ್ತಾರೆ.
ಸ್ಥಳೀಯ ಮುಖಂಡರ ಅಭಿಪ್ರಾಯ:
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ನಜೀರ ಕಂಗನೊಳ್ಳಿ ಮಾತನಾಡಿ, ಪ್ರತಿ ವರ್ಷ ಹಬ್ಬ ಆಚರಣೆ ಮಾಡಲಾಗುತ್ತದೆ. ಈ ಸಮಿತಿಯ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಮುಂಬರುವ ದಿನಗಳಲ್ಲಿ ಸಮಿತಿಯವರು ಯಾವುದೇ ಸೇವೆ ಮಾಡಲು ಸೂಚನೆ ನೀಡಿದಲ್ಲಿ ಪ್ರಾಮಾಣಿಕವಾಗಿ ಭಕ್ತಿಯಿಂದ ಮಾಡುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ಜಮಖಂಡಿಯು ಭಾವೈಕ್ಯ ಬಗ್ಗೆ ಇಡೀ ರಾಜ್ಯದಲ್ಲಿಯೇ ಮಾದರಿಯಾಗಬೇಕಾಗಿದೆ ಎಂದು ತಿಳಿಸಿದರು.
ಕೋವಿಡ್ ಹಿನ್ನೆಲೆ ಸರಳ ಆಚರಣೆ:
ಪೂಜೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರು ಭಕ್ತಾದಿಗಳಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಿ, ತಾವು ವಿತರಣೆ ಮಾಡುವ ಮೂಲಕ ಸೇವೆ ಸಲ್ಲಿಸಿದರು. ಬಸವರಾಜ ನ್ಯಾಮಗೌಡ ಎಂಬ ಯುವ ನಾಯಕನ ನೇತೃತ್ವದಲ್ಲಿ ಪತ್ರಿ ವರ್ಷ ಸಾರ್ವಜನಿಕ ಗಣೇಶ ಹಬ್ಬವನ್ನು ಆಚರಣೆ ಮಾಡಿ ವಿವಿಧ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತದೆ. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿದೆ.
ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ 920 ಧಾರ್ಮಿಕ ಕೇಂದ್ರಗಳು ಅನಧಿಕೃತ ಪಟ್ಟಿಯಲ್ಲಿವೆ - ಆದ್ರೆ ತೆರವಿನ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ: ಡಿಸಿ
ರಾಜೇಸಾಬ್ ಕಡಕೋಳ, ಪಕೀರಸಾಬ್ ಭಾಗವಾನ, ಮಹಿಬೂಬ್ ಪಾಚಾಪುರ, ಜಬ್ಬಾರ ಅಲ್ಲಿ ನದಾಫ್, ಅಯುಬಖಾನ್ ಮಾಲಿಂಗಪುರ್, ಅಬೂಬಕ್ಕರ್ ನದಾಫ್, ವರ್ಧಮಾನ ನ್ಯಾಮಗೌಡ ಸೇರಿದಂತೆ ಇನ್ನು ಅನೇಕ ಹಿಂದೂ-ಮುಸ್ಲಿಂ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ, ಪುನಸ್ಕಾರ ಸಲ್ಲಿಸಿದರು.