ಬಾಗಲಕೋಟೆ: ಕೋವಿಡ್ ರೋಗದಿಂದ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ಒಟ್ಟು ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇವರಿಗೆ ಬೆಳಗಾವಿ ವಲಯದ ಐಜಿಪಿ ಅವರು ಆಸ್ಪತ್ರೆಗೆ ಆಗಮಿಸಿ ಹೂಗುಚ್ಚ ನೀಡಿ ಸ್ವಾಗತ ಕೋರಿದ್ರು. ಇದೇ ಸಮಯದಲ್ಲಿ ಪೊಲೀಸ್ ಬ್ಯಾಂಡ್ ಹಾಗೂ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಜಮಖಂಡಿ ಪಟ್ಟಣದ ಪೊಲೀಸ್ ಸಿಬ್ಬಂದಿ ಹಾಗೂ ಮೂವತ್ತೇಳು ವರ್ಷದ ಎಟಿಎಂ ಗಾರ್ಡ್ ರೋಗಿ-263, ರೋಗಿ- 373 32 ವರ್ಷ, ಮುಧೋಳ ಪಟ್ಟಣದ ಪೊಲೀಸ್ ಸಿಬ್ಬಂದಿ ರೋಗಿ-379 43 ವರ್ಷ, ಅದೇ ರೀತಿ, ಬಾಗಲಕೋಟೆ ನಗರದ ರೋಗಿ-262 52 ವರ್ಷ ಇವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೋರ್ವ ಪೇದೆಯೂ ಗುಣಮುಖರಾಗಿದ್ದು, ಅವರ ಪುತ್ರನ ವರದಿ ಬಾರದ ಹಿನ್ನೆಲೆ ಪುತ್ರನ ಜೊತೆ ಇರುವುದಾಗಿ ಹೇಳಿದ್ದಾರೆ. ಹೀಗಾಗಿ ಕೋವಿಡ್ ಆಸ್ಪತ್ರೆಯಲ್ಲಿ ಇದ್ದಾರೆಂದು ಎಸ್ಪಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಗುಣಮುಖರಾದ ಪೊಲೀಸ್ ಪೇದೆ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಯಾರು ಭಯ ಪಡುವುದು ಅಗತ್ಯವಿಲ್ಲ. ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ರೋಗದಿಂದ ಮುಕ್ತರಾಗಬಹುದು. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದ್ರು.
ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ, ನರ್ಸ್ಗಳು ಚೆನ್ನಾಗಿ ನೋಡಿಕೊಂಡಿದ್ದಾರೆ. ಅದೇ ರೀತಿಯಾಗಿ ನಮ್ಮ ಪೊಲೀಸ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಭಯ ಪಡದಂತೆ ಸದಾ ಧೈರ್ಯ ತುಂಬಿದ್ದಾರೆ ಎಂದು ತಿಳಿಸಿದರು.
ಈ ಸಮಯದಲ್ಲಿ ಐಜಿಪಿ ರಾಘವೇಂದ್ರ ಸುಹಾಸ್ ಮಾತನಾಡಿ, ಪೊಲೀಸ್ ಇಲಾಖೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಇತರ ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಟ್ಟಿದೆ. ನಮಗೆ ಜನತೆ ಸಹಕಾರ ಅಗತ್ಯವಿದೆ ಎಂದರು.