ಸವರ್ಣಧೀರ್ಘ ಸಂಧಿ ಸಿನಿಮಾ ವಿಮರ್ಶೆ
ಸಹಜ ಸುಂದರ ಸಿನಿಮಾ ಸವರ್ಣಧೀರ್ಘ ಸಂದಿ
ಅವದಿ – 131 ನಿಮಿಷ, ಕ್ಯಾಟಗರಿ – ಲವ್ ಸ್ಟೋರಿ, ರೇಟಿಂಗ್ – 4/5
ಚಿತ್ರ – ಸವರ್ಣಧೀರ್ಘ ಸಂಧಿ, ನಿರ್ಮಾಪಕರು – ಲುಷಿಂಗ್ಟನ್
ಥಾಮಸ್, ಹೇಮಂತ್ ಕುಮಾರ್, ಮನೋ ಮೂರ್ತಿ ಹಾಗೂ
ವೀರೇಂದ್ರ ಶೆಟ್ಟಿ, ನಿರ್ದೇಶನ – ವೀರೇಂದ್ರ ಶೆಟ್ಟಿ, ಸಂಗೀತ – ಮನೋ ಮೂರ್ತಿ, ಛಾಯಾಗ್ರಹಣ – ಲೋಗನಾಥನ್ ಶ್ರೀನಿವಾಸನ್, ತಾರಾಗಣ – ವೀರೇಂದ್ರ ಶೆಟ್ಟಿ, ಕೃಷ್ಣಾ, ಕೃಷ್ಣ ನಾಡಿಗ್, ನಿರಂಜನ್ ದೇಶ್ಪಾಂದೆ, ವಿವೇಕ್ ಪಂಜಾಬಿ, ಅವಿನಾಷ್ ರಾಯ್,
ರವಿ ಮಂಡ್ಯ, ಅಜಿತ್ ಹನುಮಕ್ಕಣವರ್, ರವಿ ಭಟ್, ಬಸು ಕುಮಾರ್, ರಾಮ ರಾವ್, ದತ್ತಾತ್ರೇಯ
ಕುರುಹಟ್ಟಿ, ಮಧುಸೂಧನ್, ಪದ್ಮಜ ರಾವ್, ಸುರೇಂದ್ರ ಬಂಟ್ವಾಳ ಹಾಗೂ ಇತರರು.
ಬರುವ ಕನ್ನಡ ರಾಜ್ಯೋತ್ಸವಕ್ಕೆ ಒಂದು ಉತ್ತಮ ವ್ಯಾಕರಣ ಬದ್ದ ಕನ್ನಡ ಸಿನಿಮಾ
ಹಾಜರಾಗಿದೆ. ಕನ್ನಡದ ಮೇಲಿನ ಪ್ರೇಮವೇ ಇಲ್ಲಿ ಮೇಲುಗೈ ಸಾದಿಸಿರುವುದು. ಪ್ರೇಮ, ಪ್ರೀತಿ, ಆಕ್ಷನ್, ಕುತೂಹಲ, ಸಸ್ಪೆನ್ಸ್ ವಿಷಯಗಳನ್ನು ನಿರ್ದೇಶಕ ವೀರೇಂದ್ರ ಶೆಟ್ಟಿ ಹದವಾಗಿ, ಸಹಜವಾಗಿ, ನವಿರಾಗಿ ಹೇಳಿರುವುದು ಸಿನಿಮಾದ ಮೊದಲ ಶಕ್ತಿ. ಚಿತ್ರದ
ನಿರೂಪಣೆ ಶೈಲಿ ಹೊಸದು, ಬಳಸಿರುವ ವ್ಯಾಕರಣ ಅರ್ಥ ಪೂರ್ಣ, ಹಾಡುಗಳು ಮೇಲ್ಪಂಕ್ತಿಯಲ್ಲಿವೆ, ಛಾಯಾಗ್ರಹಣವಂತು ಮನಸೂರೆಗೊಳ್ಳುತ್ತದೆ.
ಇನ್ನೂ ಅಭಿನಯದ ವಿಚಾರಕ್ಕೆ ಬಂದರೆ ಎಲ್ಲ ಪಾತ್ರಗಳು ಗಮನ ಸೆಳೆಯುವಂತೆ ನಿರ್ದೇಶಕ ವೀರೇಂದ್ರ ಶೆಟ್ಟಿ
ನೋಡಿಕೊಂಡಿದ್ದಾರೆ. ‘ಚಾಲಿ ಪೊಲೀಲು’ ತುಳು ಸಿನಿಮಾ
ಯಶಸ್ಸಿನಿಂದ ಅವರಿಗೆ ಪ್ರೇಕ್ಷಕರ ನಾಡಿ ಮಿಡಿತ ಗೊತ್ತಾದಂತೆ ಇದೆ. ಈ ಚಿತ್ರದಲ್ಲಿ ‘ಪಾಸಿಟಿವ್ ರೌಡಿ ಇಸಂ’ ಸಹ ಇಂದಿನ ಕಾಲಕ್ಕೆ ಸರಿಯೋನೆ ಅಂತ ಅನ್ನಿಸಿಬಿಡುತ್ತದೆ.
ಅದೊಂದು ಮುದ್ದಣ್ಣ ಗ್ಯಾಂಗ್. ಈ ಗ್ಯಾಂಗಿಗೆ ಲೀಡರ್ ತಿಮ್ಮ ಅಲಿಯಾಸ್ ಮುದ್ದಣ್ಣ.
ಇವನ ಬಾಲ್ಯದಲ್ಲಿ ಬಿದ್ದ ಹೊಡತ, ಕಂಡ ಭಯಾನಕ ದೃಶ್ಯ ಇವನು ಬೆಳೆಯುತ್ತಾ ರೌಡಿ ಆಗಿಬಿಡುತ್ತಾನೆ.
ತನ್ನದೇ ಗ್ಯಾಂಗ್ ಇಂದ ಯಾವುದೇ ಚಿಕ್ಕ ಕುರುಹು ನೀಡದೆ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸುತ್ತಾ
ಇರುತ್ತಾನೆ. ಬಡವರಿಗೆ ಪೊರೆಯುವ ಹೃದಯ ಈ ಪಾಸಿಟಿವ್ ರೌಡಿ ತಂಡ ಮುದ್ದಣ್ಣ ಗ್ಯಾಂಗ್ ಅನ್ನು ಪೊಲೀಸರು
ಏನಾದರೂ ಮಾಡಿ ಕಂಬಿ ಎನಿಸುವಂತೆ ಮಾಡಬೇಕು ಆದರೆ ಅದು ಅಷ್ಟು ಸುಲಭದ ಮಾತಲ್ಲ. ಇಬ್ಬರು ಪೊಲೀಸ್ ಅಧಿಕಾರಿಗಳು
ವರ್ಗವಾದರೂ ಈ ಮುದ್ದಣ್ಣ ಗ್ಯಾಂಗ್ ಅನ್ನು ಹಿಡಿಯಲು ಸಾಧ್ಯವಾಗುವುದಿಲ್ಲ.
ಮುದ್ದಣ್ಣ ಚಿಕ್ಕ ವಯಸ್ಸಿನಲ್ಲಿ ತಿಮ್ಮ ಆದವನು ಕಳೆದದ್ದನ್ನು ಪಡೆದುಕೊಳ್ಳುತ್ತಾನೆ.
ಅದರಲ್ಲಿ ಮೊದಲು ಬಾಲ್ಯದ ಗೆಳತಿ ಮತ್ತು ಕನ್ನಡ ಕಲಿಸಿದ ಮೇಷ್ಟ್ರು. ಈ ಮಧ್ಯೆ ಆತನ ತಂಡದ ಮೇಲೆ ರಿವೇಂಜ್ ತೆಗೆದುಕೊಳ್ಳಲು ಮತ್ತೊಂದು
ಗ್ಯಾಂಗ್ ಇದೆ. ಆ ಗ್ಯಾಂಗಿನ ಒಂದು ಅಟ್ಯಾಕ್ ಮುದ್ದಣ್ಣ ಗ್ಯಾಂಗ್ ಅನ್ನು ಸ್ವಲ್ಪ ಕಸಿವಿಸಿ ಮಾಡಿಬಿಡುತ್ತದೆ.
ಮುದ್ದಣ್ಣ ತನ್ನ ಪ್ರೇಯಸಿಯನ್ನು ಪಡೆಯುವುದರ ಜೊತೆಗೆ ಯಾವ ರೀತಿ ಆದ ಪೆಟ್ಟಿಗೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ
ಎಂಬುದನ್ನೂ ನೀವು ಚಿತ್ರಮಂದಿರದಲ್ಲಿ ನೋಡಬೇಕು.
ವೀರೇಂದ್ರ ಶೆಟ್ಟಿ ಮೊದಲ ಕನ್ನಡ ಸಿನಿಮಾದಲ್ಲಿ ಸಹಜತೆಯಿಂದ ಮಿಂಚಿದ್ದಾರೆ.
ನಾಯಕ ಅಂದರೆ ಬಿಲ್ಡ್ ಅಪ್, ಸಾಹಸ, ಉದ್ದುದ್ದಾ ಸಂಭಾಷೆನೆ
ಇಲ್ಲಿ ಇಲ್ಲವೇ ಇಲ್ಲ. ಒಂದು ಕಮರ್ಷಿಯಲ್ ಫಾರ್ಮುಲಾ ಚಿತ್ರವನ್ನೂ ತಮ್ಮದೇ ಆದ ದಾಟಿಯಲ್ಲಿ ಮನಸಿಗೆ
ಒಪ್ಪುವಂತೆ ಹೇಳಿದ್ದಾರೆ, ನಟಿಸಿದ್ದಾರೆ, ಬರೆದಿದ್ದಾರೆ, ನಿರ್ಮಾಣ ಸಹ ಮಾಡಿದ್ದಾರೆ.
ಕನ್ನಡ ಚಿತ್ರ ರಂಗಕ್ಕೆ ಮತ್ತೊಂದು ಮುದ್ದಾದ, ಎತ್ತರದ, ಬೋಲ್ಡ್ ಹುಡುಗಿ ನಾಯಕಿ ಆಗಿ ಆಗಮಿಸಿದ್ದಾರೆ. ಕೊಳಳಾದೆ ನಾ ಕೃಷ್ಣ ನಿನ್ನ ಕೈಯಲ್ಲಿ...ಹಾಡಿನಲ್ಲಿ
ಎಷ್ಟು ಸುಂದರವಾಗಿ ಕಾಣುತ್ತಾರೋ ಹಾಗೆ ಪಡ್ಡೆ ಹುಡುಗರಿಗೆ ಸಹ ಇಷ್ಟ ಆಗುವುದು ಈ ಅಮೃತವರ್ಶಿನಿ ಪಾತ್ರದ
ನಾಯಕಿ ಕೃಷ್ಣಾ ತಾನು ಸೇದಿದ ಸಿಗರೇಟ್ ಹೊಗೆ ನಾಯಕನ ಬಾಯಿಗೆ ತುರುಕಿ ಆ ನಂತರ ನಾಯಕ ಆಚೆ ತೆಗೆಯುವುದರಿಂದ.
ಸಿಗರೇಟ್ ಸೇವನೆ ಇಷ್ಟ ಪಡುವ ಪ್ರೇಮಿಗಳು ಈ ರೀತಿಯಲ್ಲೂ ಸಿಗರೇಟ್ ಸೇದಬಹುದು.
ವೀರೇಂದ್ರ ಶೆಟ್ಟಿ ತಂಡದ ಖಳರಲ್ಲಿ ಪೂಜಾರಿ ಮಗನ ಪಾತ್ರ ಮಾಡಿರುವವರು ಹೆಚ್ಚು
ಆಕರ್ಷಿಸುತ್ತಾರೆ. ಹಾಗೆ ಈ ತಂಡದ ಒಂದು ಅಜ್ಜಿ ಸಹ ನೆನಪಿನಲ್ಲಿ ಉಳಿಯುತ್ತಾರೆ. ಅಜಿತ್ ಹನುಮಕ್ಕನವರ
ಹಾಗೂ ರವಿ ಮಂಡ್ಯ (ಭಾರ್ಗಿ ಇನ್ ಮಗಳು ಜಾನಕಿ ಟಿ ವಿ ಸಿರಿಯಲ್) ಮಾತು ಕಥೆ ಇಷ್ಟ ಆಗುತ್ತದೆ. ಕೃಷ್ಣ
ನಾಡಿಗ್ ಕನ್ನಡ ಪಂಡಿತರಾಗಿ ಆಡುವ ಮಾತುಗಳು ವಾರೆ ವಾಹ್ ಅನ್ನಿಸುತ್ತದೆ. ಕನ್ನಡ ಸಿನಿಮಾಗಳಲ್ಲಿ ಕೆ
ಎಸ್ ಎಲ್ ಸ್ವಾಮೀ (ರವೀ) ಅವರು ಮಾಡುತ್ತಾ ಇದ್ದ ಪಾತ್ರ ಕೃಷ್ಣ ನಾಡಿಗ್ ಅವರಿಗೆ ಸಿಕ್ಕಿದೆ. ಅವರು
ಸ್ವಾಮೀ ಅವರ ತದ್ರೂಪಿನ ಹಾಗೆ ಸಹ ಕಾಣುತ್ತಾರೆ.
ಮನೋ ಮೂರ್ತಿ ಅವರ ನಾಲ್ಕು ಹಾಡುಗಳು ಸುಮಧುರವಾಗಿದೆ. ಅದರಲ್ಲಿ ಕೊಳಳಾದೆ
ನಾ ಕೃಷ್ಣ... ಮತ್ತು ಮಧು ಮಧುರ ಭಾವದಲ್ಲಿ...ಮತ್ತೊಂದು ಬಹಳ ಕಾಲ ಉಳಿಯುವ ಹಾಡು. ಇದು ಮನೋ ಮೂರ್ತಿ
ಅವರ ಕಮ್ ಬ್ಯಾಕ್ ಸಿನಿಮಾ ಅಂದರೂ ತಪ್ಪಾಗಲಾರದು.
ಛಾಯಾಗ್ರಾಹಕ ಲೋಗನಾಥನ್ ಶ್ರೀನಿವಾಸನ್ ಅವರ ಹೊರಾಂಗಣ ಚಿತ್ರೀಕರಣ ಅಷ್ಟೇ
ಅಲ್ಲ ಕ್ಲೋಸ್ ಅಪ್ ದೃಶ್ಯಗಳು ಸೊಗಸಾಗಿದೆ.
ಮನೆ ಮಂದಿಯೆಲ್ಲಾ ಕುಳಿತು ಆರಾಮವಾಗಿ ನೋಡಿ, ನಕ್ಕು
ನಳಿಯುವ ಸಿನಿಮಾ ಈ ‘ಸವರ್ಣಧೀರ್ಘ ಸಂಧಿ’.