ಚಿತ್ರ : ಕನ್ನಡ್ ಗೊತ್ತಿಲ್ಲ
ನಿರ್ಮಾಪಕರು : ಕುಮಾರ ಕಂಠೀರವ
ನಿರ್ದೇಶಕ : ಮಯೂರ್ ರಾಘವೇಂದ್ರ
ಸಂಗೀತ : ನಕುಲ್ ಅಭಯಂಕರ್
ಛಾಯಾಗ್ರಹಣ : ಗಿರಿಧರ್ ದಿವಾನ್
ತಾರಾಗಣ : ಹರಿಪ್ರಿಯಾ, ಪವನ್ ಕುಮಾರ್, ಮಯೂರ್, ಸುಧಾರಾಣಿ, ಧರ್ಮಣ್ಣ ಹಾಗೂ ಇತರರು.
ಇದೊಂದು ಥ್ರಿಲ್ಲರ್ ಜೊತೆಗೆ ಕನ್ನಡ ಮಾತನಾಡದ ಹೊರಗಿನವರಿಗೆ ಮತ್ತು ಬೆಂಗಳೂರಿಗರಿಗೆ ಬಿಸಿ ಮುಟ್ಟಿಸುವ ಸಿನಿಮಾವಾಗಿದೆ. ಹಾಗೆ ನೋಡಿದರೆ ಒಂದು ಪಾತ್ರ ಇಡೀ ಚಿತ್ರದಲ್ಲಿ ಡೆಂಜರ್ ಆಯಿತು ಅನ್ನಿಸುವಷ್ಟರಲ್ಲಿ ನಿರ್ದೇಶಕ ಮಯೂರ್ ರಾಘವೇಂದ್ರ ಅಂತ್ಯ ಹಾಡಿದ್ದಾರೆ.
ಮೊದಲ ಸಿನಿಮಾದಲ್ಲಿ ಪ್ರೇಕ್ಷಕರನ್ನು ಹಿಡಿದು ಕೂಡಿಸುವ ಕಲೆ ಮಯೂರ್ ಅವರಿಗೆ ಗೊತ್ತಾಗಿದೆ. ಅದರ ಜೊತೆಗೆ ಅವರ ಚಿತ್ರಕಥೆ ದ್ವಿತೀಯಾರ್ಧ ಭರ್ಜರಿಯಾಗೆ ಇದೆ. ಸರಣಿ ಕೊಲೆ ಹಾಗೂ ಸರಣಿ ಅಪಹರಣದ ಸುತ್ತ ತಿರುಗುವ ಈ ಚಿತ್ರದಲ್ಲಿ ಕಡೆಯ 15 ನಿಮಿಷದವರೆವಿಗೂ ಪ್ರೇಕ್ಷಕ ತನ್ನ ಮನಸಿನಲ್ಲಿ ಯಾರು ಹೀಗೆಲ್ಲಾ ಮಾಡುತ್ತಿರುವುದು ಎಂದು ಲೆಕ್ಕ ಹಾಕುವಂತೆ ಮಾಡಿದ್ದಾರೆ,
ಪೊಲೀಸ್ ಇಲಾಖೆಯಲ್ಲಿ ಕಾಣೆ ಆದವರ ಬಗ್ಗೆ ಗಮನ ಹರಿಸಲು ಶ್ರುತಿ ಚಕ್ರವರ್ತಿ (ಹರಿಪ್ರಿಯಾ) ನೇಮಕ ಆಗುತ್ತದೆ. ಮೂರು ದಿವಸದಲ್ಲಿ ಎಂಟು ಅಪಹರಣ ಆದ ವ್ಯಕ್ತಿಗಳು ಯಾರು ಕನ್ನಡದವರಲ್ಲ ಎಂಬ ಮಾಹಿತಿ ಶ್ರುತಿ ಪತ್ತೆ ಹಚ್ಚುತ್ತಾಳೆ. ಇದರಿಂದ ಕುತೂಹಲದ ಜೊತೆಗೆ ನಿರ್ದೇಶಕರು ಗಾಬರಿ ಆಗುವ ಹಾಗೆ ಏನಾದರೂ ಹೇಳಲು ಹೊರಟಿದ್ದಾರಾ? ಎಂಬ ಆಲೋಚನೆ ಬರುವಂತಿದೆ.
![haripriya](https://etvbharatimages.akamaized.net/etvbharat/prod-images/kannad-goththilla-haripriya1574432639975-66_2211email_1574432651_192.jpg)
ಆದರೆ, ಇದಕ್ಕೆಲ್ಲ ಶ್ರುತಿ ಅವರ ಪತ್ತೇದಾರಿ ಕೆಲಸದಲ್ಲಿ ಉತ್ತರ ಸಿಗುತ್ತದೆ. ಯಾರು ಸರಣಿ ಅಪಹರಣ ಮಾಡಿದವರು, ಅದರ ಜೊತೆಗೆ ಕೊಲೆಗಳು ಸಹ ಏಕೆ ಆಯಿತು ಎಂಬ ವಿಚಾರ ನೀವು ಚಿತ್ರಮಂದಿರದಲ್ಲೇ ತಿಳಿಯಬೇಕು.
ಹರಿಪ್ರಿಯಾ ಮುದ್ದು ಮುದ್ದಾಗಿ ಕಾಣುವುದಷ್ಟೇ ಅಲ್ಲದೆ ಖಡಕ್ ಆಗಿ ಅಭಿನಯಿಸಿದ್ದಾರೆ. ವೃತ್ತಿ ಜೀವನದಲ್ಲಿ ಹಾಸ್ಯ ನಟ ಪವನ್ ಅವರಿಗೆ ಇದು ವಿಭಿನ್ನ ಸಿನಿಮಾ. ಅವರ ಅಭಿನಯದ ತಾಕತ್ತು ಇಲ್ಲಿ ಪ್ರದರ್ಶನ ಆಗಿದೆ. ಧರ್ಮಣ್ಣ ಪಾತ್ರ ಸಹ ನೋಡುಗರಿಗೆ ಇಷ್ಟ ಆಗುತ್ತದೆ. ಸುಧಾರಾಣಿಯದು ಗಾಂಭೀರ್ಯ ತುಂಬಿದ ಪಾತ್ರ.
ಹಿನ್ನೆಲೆ ಸಂಗೀತವನ್ನು ನಕುಲ್ ಅಭಯಂಕರ್ ನೀಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಗಿರಿಧರ್ ದಿವಾನ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕನ್ನಡ ಮಾತನಾಡದವರೆ ಯಾಕೆ ಕಾಣೆಯಾದರು, ಅವರು ಅಮೇಲೆ ಏನಾದರೂ, ಕೊಲೆಗಳು ಯಾಕೆ ನಡೆದವು ಎಂಬುದು ಗೋಪ್ಯವಾದ ವಿಚಾರವಾಗಿದೆ.