ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ದ್ರೋಣ ಚಿತ್ರದ ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸೋದು ಕನ್ಫರ್ಮ್ ಆಗಿದೆ. ಮೊದಲ ಬಾರಿಗೆ ರವಿ ಧುಲಿಪುಡಿ ನಿರ್ದೇಶನಕ್ಕೆ ಇಳಿದಿದ್ದಾರೆ. ಕೇವಲ 10 ನಿಮಿಷದಲ್ಲಿ ಕಥೆಯ ಶಕ್ತಿ ಗಮನಿಸಿ ಶಿವಣ್ಣ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ತೆಲುಗು ಭಾಷೆಯ ಸಾಹಿತಿ ರವಿ ಧುಲಿಪುಡಿ ಕೆಲವು ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಸಹ ಕೆಲಸ ಮಾಡಿದ ಅನುಭವವಿದೆ. ಚಿತ್ರದಲ್ಲಿ ಒಬ್ಬ ಸಂತನ ಗುಣ ಇರುವ ನಾಯಕ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನರೇಲ ಶ್ರೀನಿವಾಸ ರೆಡ್ಡಿ ಅವರು ಶಿವರಾಜ್ಕುಮಾರ್ ಮುಂದಿನ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ಅಂದಹಾಗೆ ಈ ಚಿತ್ರ ಇದೇ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭ ಆಗಿ ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಬಿಡುಗಡೆಗೆ ಯೋಜನೆ ಸಿದ್ಧಪಡಿಸಲಾಗಿದೆ. ಚಿಕ್ಕಮಗಳೂರು, ಕಾಶ್ಮೀರ ಹಾಗೂ ಅಮೆರಿಕದಲ್ಲಿ ಚಿತ್ರೀಕರಣ ನಡೆಸುವ ತಯಾರಿ ನಡೆಸಲಾಗಿದೆ. ಸದ್ಯ ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’, ಆರ್ ಡಿ ಎಕ್ಸ್ ಹಾಗೂ ಭೈರತಿ ರಣಗಲ್’ ಚಿತ್ರಗಳನ್ನು ಪೂರ್ಣಗೊಳಿಸಬೇಕಿದೆ.