ಆಪರೇಷನ್ ಅಲಮೇಲಮ್ಮ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ಆರಡಿ ಉದ್ದದ ರಿಷಿ ಅವರು ಇದೀಗ ಕಿರುತೆರೆಗೆ ಬರುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸಾರೆ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ರಿಷಿ ಬಣ್ಣ ಹಚ್ಚುತ್ತಿದ್ದಾರೆ. ಸಣ್ಣ ಬ್ರೇಕ್ನ ನಂತರ ಮತ್ತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ರಿಷಿ, ತಂದೆ ಮಗಳ ನಡುವೆ ಇರುವ ಮೈಮನಸ್ಸು, ಅಸಮಾಧಾನವನ್ನು ದೂರ ಮಾಡಲು ಬರುತ್ತಿದ್ದಾರೆ.

ಅಂದ ಹಾಗೇ ರಿಷಿ ಅವರಿಗೆ ಬಣ್ಣದ ಲೋಕ ಹೊಸತೇನಲ್ಲ. ಕಾಲೇಜು ದಿನಗಳಿಂದಲೇ ನಾಟಕದ ಗೀಳು ಬೆಳೆಸಿಕೊಂಡಿದ್ದ ರಿಷಿ ನಾಟಕದಲ್ಲಿ ನಟಿಸುವುದರ ಮೂಲಕ ನಾಟಕ ತಂಡದ ಜವಬ್ದಾರಿಯನ್ನು ತೆಗೆದುಕೊಂಡಿದ್ದರು. ಟಿ.ಎನ್.ಸೀತಾರಾಮ್ ನಿರ್ದೇಶನದ ಮಹಾಪರ್ವ ಧಾರಾವಾಹಿಯ ಮೂಲಕ ಬಣ್ಣದ ನಂಟು ಆರಂಭಿಸಿದ ರಿಷಿ ಮುಂದೆ ಪೂರ್ಣ ಪ್ರಮಾಣದ ಕಿರುತೆರೆ ನಾಯಕನಾಗಿದ್ದು ಅನುರೂಪದಲ್ಲಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನುರೂಪದಲ್ಲಿ ನಾಯಕ ತೇಜಸ್ವಿಯಾಗಿ ಅಭಿನಯಿಸಿದ ರಿಷಿ ಕಿರುತೆರೆ ವೀಕ್ಷಕರ ಮನ ಸೆಳೆದರು. ಮಾತ್ರವಲ್ಲ ಸುವರ್ಣ ಪರಿವಾರ ಕೊಡ ಮಾಡುವ ಬೆಸ್ಟ್ ನಟ ಪ್ರಶಸ್ತಿಯನ್ನು ಪಡೆದರು.
ಅನುರೂಪದ ನಂತರ ಆಪರೇಶನ್ ಆಲಮೇಲಮ್ಮ ಧಾರಾವಾಹಿಯ ಪರಮೇಶಿ ಪಾತ್ರಕ್ಕೆ ಜೀವ ತುಂಬಿದ ರಿಷಿ ಮೊದಲ ಸಿನಿಮಾಕ್ಕೆ ಸೈಮಾ ಕೊಡಮಾಡುವ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿ ಪಡೆದಿದ್ದಾರೆ. ಮುಂದೆ ಕವಲುದಾರಿ ಸಿನಿಮಾದಲ್ಲಿ ನಟಿಸಿದ ರಿಷಿ ಮುಂದೆ ರಾಮನವತಾರ, ಸಾರ್ವಜನಿಕರಿಗೆ ಸುವರ್ಣಾವಕಾಶ, ಗಾಳಿಪಟ - 2 ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಮನಸಾರೆ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತೀರಾ ಎಂದು ಕೇಳಿದಾಗ ಆಶ್ಚರ್ಯವಾಯಿತು. ಆದರೆ ಪಾತ್ರದ ಬಗ್ಗೆ ತಿಳಿದಾಗ ಖುಷಿ ಆಗಿ ಒಪ್ಪಿಕೊಂಡೆ. ಮಾತ್ರವಲ್ಲ ಇದೀಗ ತುಂಬಾ ಸಮಯದ ನಂತರ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ ಎನ್ನುತ್ತಾರೆ ರಿಷಿ. ಒಟ್ಟಿನಲ್ಲಿ ಇದೀಗ ತಮ್ಮ ನೆಚ್ಚಿನ ನಟನನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.