ಬೆಂಗಳೂರು: ಭಾ.ಮ ಹರೀಶ್ ನಿರ್ಮಾಣದ 'ನಿರ್ಮಲ' ಚಿತ್ರತಂಡ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಭೀಕರ ಮಳೆಗೆ ತತ್ತರಿಸಿರುವ ಸಂತ್ರಸ್ತರಿಗೆ ಭಾ.ಮ ಹರೀಶ್ ಹಾಗೂ 'ನಿರ್ಮಲ' ಚಿತ್ರತಂಡ ಸುಮಾರು ಎರಡು ಲಕ್ಷ ರೂಪಾಯಿಯಷ್ಟು ಅಗತ್ಯ ಸಾಮಗ್ರಿಗಳನ್ನು ಕರ್ನಾಟಕ ವಾಣಿಜ್ಯ ಮಂಡಳಿಗೆ ನೀಡಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿವೆ. ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ. ಹಾಗಾಗಿ ಸಂತ್ರಸ್ತರಿಗೆ ಉಪಯುಕ್ತವಾಗುವಂತ ಹಲವು ಸಾಮಗ್ರಿಗಳನ್ನು ಫಿಲ್ಮ್ ಚೇಂಬರ್ಗೆ ನೀಡಿದ್ದೇವೆ. ಅಲ್ಲದೆ ಇನ್ನೂ ಕೆಲವು ನಿರ್ಮಾಪಕರು ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚುವುದಾಗಿ ತಿಳಿಸಿದ್ದಾರೆ. ಆ ವಸ್ತುಗಳು ಬಂದ ನಂತರ ಒಟ್ಟಿಗೆ ಎಲ್ಲಾ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲು ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳುತ್ತದೆ ಎಂದು ನಿರ್ಮಾಪಕ ಭಾ.ಮ ಹರೀಶ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಮಾತನಾಡಿ, ನೆರೆಸಂತ್ರಸ್ತರಿಗೆ ಸಹಾಯ ಮಾಡಲು ಇಚ್ಚಿಸುವವರು ವಾಣಿಜ್ಯ ಮಂಡಳಿಗೆ ಬಂದು ನೆರವು ನೀಡಬಹುದು. ಆ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸವನ್ನು ವಾಣಿಜ್ಯ ಮಂಡಳಿ ಮಾಡಲಿದೆ. ಅಲ್ಲದೆ ಸಾಮಗ್ರಿಗಳನ್ನು ಅರ್ಹರಿಗೆ ತಲುಪಿಸುವ ಸಲುವಾಗಿ ನೆರೆಪೀಡಿತ ಪ್ರದೇಶದ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂದು ಹೇಳಿದ್ದಾರೆ.