ಡಾ. ರಾಜ್ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ ಮಾತ್ರವಲ್ಲ ಒಳ್ಳೆಯ ಗಾಯಕ ಕೂಡಾ. ತಮ್ಮ ಅಭಿನಯದ ಮೂಲಕ ಕನ್ನಡ ಚಿತ್ರರಂಗವನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ದ ಕನ್ನಡಿಗರ ಆರಾಧ್ಯ ದೈವ ಡಾ. ರಾಜ್ಕುಮಾರ್.
![Dr Rajkumar also famous for singing](https://etvbharatimages.akamaized.net/etvbharat/prod-images/ka-bng-2-drrajkumar-hit-songs-list-special-story-images-ka10012_23052020153522_2305f_1590228322_559.jpg)
ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಚಿನ್ನದ ಕಳಸ ಇದ್ದಂತೆ. ಅವರು ನಟಿಸಿದ ಸಿನಿಮಾಗಳು ಮಾತ್ರವಲ್ಲ, ಅವರು ಹಾಡಿರುವ ಬಹುತೇಕ ಎಲ್ಲಾ ಸಿನಿಮಾಗಳು ಕೂಡಾ ಸಕ್ಸಸ್ ಕಂಡಿವೆ. 1974 ರಲ್ಲಿ ಬಿಡುಗಡೆಯಾಗಿ ದೊಡ್ಡ ಸಕ್ಸಸ್ ಕಂಡ ಎ.ವಿ. ಶೇಷಗಿರಿರಾವ್ ನಿರ್ದೇಶನದ 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿ 'ಯಾರೇ ಕೂಗಾಡಲಿ ಊರೇ ಹೋರಾಡಲಿ' ಎಂಬ ಹಾಡನ್ನು ಹಾಡುವ ಮೂಲಕ ಗಾಯಕನಾಗಿ ಗುರುತಿಸಿಕೊಂಡ ಅಣ್ಣಾವ್ರು ನಂತರ ಅವರು ನಟಿಸಿದ ಎಲ್ಲಾ ಚಿತ್ರಗಳಲ್ಲೂ ಹಾಡಿದರು. ಆ ಹಾಡುಗಳು ಇಂದಿಗೂ ಜನರ ಹೃದಯದಲ್ಲಿ ಸ್ಥಾನ ಪಡೆದಿವೆ.
![Dr Rajkumar also famous for singing](https://etvbharatimages.akamaized.net/etvbharat/prod-images/ka-bng-2-drrajkumar-hit-songs-list-special-story-images-ka10012_23052020153522_2305f_1590228322_992.jpg)
ಅಣ್ಣಾವ್ರ ಕಂಚಿನ ಕಂಠಕ್ಕೆ ಮನಸೋತ ಅದೇಷ್ಟೋ ಸಂಗೀತ ನಿರ್ದೇಶಕರು, ನಿರ್ಮಾಪಕರು, ನಿರ್ದೇಶಕರು ಬೇರೆ ನಾಯಕ ನಟಿಸಿದ್ದ ಚಿತ್ರಗಳಿಗೂ ಅಣ್ಣಾವ್ರ ಬಳಿ ಹಾಡಿಸಿದ್ದಾರೆ. ಅಣ್ಣಾವ್ರು ಹಾಡಿದ ಬಹುತೇಕ ಎಲ್ಲಾ ಸಿನಿಮಾಗಳು ಯಶಸ್ವಿಯಾಗಿರುವುದಲ್ಲದೆ ಗಲ್ಲಾ ಪೆಟ್ಟಿಗೆಯಲ್ಲೂ ಭಾರೀ ಸದ್ದು ಮಾಡಿದೆ.
![Dr Rajkumar also famous for singing](https://etvbharatimages.akamaized.net/etvbharat/prod-images/ka-bng-2-drrajkumar-hit-songs-list-special-story-images-ka10012_23052020153522_2305f_1590228322_1030.jpg)
ಪುತ್ರ ಶಿವರಾಜ್ ಕುಮಾರ್ ಅಭಿನಯದ ಚಿತ್ರಗಳಿಗೆ ವರನಟ ಅತಿ ಹೆಚ್ಚು ಹಾಡು ಹಾಡಿದ್ದಾರೆ. ಬಹುತೇಕ ಎಲ್ಲಾ ಚಿತ್ರಗಳು ಹಿಟ್ ಆಗಿವೆ. ಓಂ, ಜನುಮದ ಜೋಡಿ, ಜೋಡಿಹಕ್ಕಿ, ರಣರಂಗ, ರೌಡಿ ಅಳಿಯ, ಗಡಿಬಿಡಿ ಕೃಷ್ಣ, ವಿಶ್ವ, ಭೂಮಿ ತಾಯಿ ಚೊಚ್ಚಲ ಮಗ, ಜಗ ಮೆಚ್ಚಿದ ಮಗ ,ಹಗಲು ವೇಷ, ಗಂಡುಗಲಿ, ಪುರುಷೋತ್ತಮ, ಶಿವಸೈನ್ಯ, ಕುರುಬನ ರಾಣಿ, ಚಿಗುರಿದ ಕನಸು, ಗಾಜನೂರ ಗಂಡು ಹೀಗೆ ಶಿವಣ್ಣನ ಅನೇಕ ಚಿತ್ರಗಳಿಗೆ ಅಣ್ಣಾವ್ರು ಹಾಡಿದ್ದಾರೆ.
![Dr Rajkumar also famous for singing](https://etvbharatimages.akamaized.net/etvbharat/prod-images/7317209_328_7317209_1590253692524.png)
ಅದೇ ರೀತಿ ಅಣ್ಣಾವ್ರು ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಮಿಡಿದ ಹೃದಯಗಳು, ಮಣ್ಣಿನ ದೋಣಿ, ಸಪ್ತಪದಿ, ಹೃದಯ ಹಾಡಿತು ಚಿತ್ರಗಳಲ್ಲೂ ಹಾಡಿದ್ದಾರೆ. ಈ ಚಿತ್ರದ ಹಾಡುಗಳು ಇಂದಿಗೂ ಎವರ್ ಗ್ರೀನ್ ಹಾಡುಗಳು ಎನಿಸಿವೆ. ಹೊಸ ನಟರ ಚಿತ್ರಗಳಿಗೂ ಹಾಡಿ ಹೊಸಬರಿಗೆ ಪ್ರೋತ್ಸಾಹ ನೀಡಿದ್ದಾರೆ. 'ಮೇಘಮಾಲೆ' ಚಿತ್ರದಲ್ಲಿ ಅಣ್ಣಾವ್ರು ಹಾಡಿರುವ ಶೀರ್ಷಿಕೆ ಗೀತೆ ಇಂದಿಗೂ ಫೇಮಸ್. ಅದೇ ರೀತಿ ಕುಮಾರ್ ಬಂಗಾರಪ್ಪ ಅಭಿನಯದ 'ಅಶ್ವಮೇಧ' ಚಿತ್ರದಲ್ಲಿ ರಾಜಣ್ಣ ಹಾಡಿರುವ 'ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ' ಹಾಡು ಆ ಚಿತ್ರಕ್ಕೆ ದೊಡ್ಡ ಮೈಲೇಜ್ ಕೊಟ್ಟಿತ್ತು. ಇಂದಿಗೂ ಕೂಡಾ ಬಹಳಷ್ಟು ಆರ್ಕೆಸ್ಟ್ರಾಗಳಲ್ಲಿ ಈ ಹಾಡನ್ನು ಗಾಯಕರು ಹಾಡೇ ಹಾಡುತ್ತಾರೆ.
![Dr Rajkumar also famous for singing](https://etvbharatimages.akamaized.net/etvbharat/prod-images/ka-bng-2-drrajkumar-hit-songs-list-special-story-images-ka10012_23052020153522_2305f_1590228322_78.jpg)
ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಒಟ್ಟಿಗೆ ಅಭಿನಯಿಸಿರುವ 'ಕರುಳಿನ ಕುಡಿ' ಚಿತ್ರದಲ್ಲೂ ಅಣ್ಣಾವ್ರು ಹಾಡಿರುವ ಹಾಡು ಇಂದಿಗೂ ಕೇಳುವವರ ಕಣ್ಣಂಚಲಿ ನೀರು ತರಿಸುತ್ತದೆ. ಅಲ್ಲದೆ ಈ ಚಿತ್ರ ಕೂಡಾ ಯಶಸ್ವಿಯಾಗಿತ್ತು. ಇಷ್ಟು ಮಾತ್ರವಲ್ಲದೆ ಅಣ್ಣಾವ್ರು ಗಾಯಕನಾಗಿ ಒಂದು ವಿಶೇಷ ದಾಖಲೆ ಕೂಡಾ ಬರೆದಿದ್ದಾರೆ. ಭಾರತೀಯ ಚಿತ್ರರಂಗದ ಬಹುತೇಕ ನಟರ ಚಿತ್ರಗಳಿಗೆ ಹಾಡಿರುವ ಅದ್ಭುತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕಂಠದಾನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ ನಟಸಾರ್ವಭೌಮ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಪೋಷಕ ಪಾತ್ರದಲ್ಲಿ ಅಭಿನಯಿಸಿರುವ, ಸುಪ್ರೀಮ್ ಹೀರೋ ಶಶಿಕುಮಾರ್ ಹಾಗೂ ಶೃತಿ ಅಭಿನಯದ ಸೂಪರ್ ಹಿಟ್ 'ಮುದ್ದಿನ ಮಾವ' ಚಿತ್ರದಲ್ಲಿ ಅಣ್ಣಾವ್ರು ಎಸ್ಪಿಬಿ ಅವರಿಗೆ ಹಾಡಿದ್ದಾರೆ. 'ದೀಪಾವಳಿ ದೀಪಾವಳಿ' ಹಾಡು ಇಂದಿಗೂ ಬಹಳ ಫೇಮಸ್.
![Dr Rajkumar also famous for singing](https://etvbharatimages.akamaized.net/etvbharat/prod-images/ka-bng-2-drrajkumar-hit-songs-list-special-story-images-ka10012_23052020153522_2305f_1590228322_592.jpg)
ಇದಲ್ಲದೆ ಅಣ್ಣಾವ್ರು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಎವರ್ ಗ್ರೀನ್ ಚಿತ್ರ ಅಪ್ಪು, ಅಭಿ, ವಂಶಿ, ಮೂರೂ ಚಿತ್ರಗಳಲ್ಲೂ ಹಾಡಿದ್ದಾರೆ. ಈ ಮೂರೂ ಸಿನಿಮಾಗಳೂ ದೊಡ್ಡ ಹಿಟ್ ಆಗಿವೆ. ಅದೇ ರೀತಿ ಅಣ್ಣಾವ್ರು ರಾಘವೇಂದ್ರ ರಾಜ್ಕುಮಾರ್ ಸಿನಿಮಾಗಳಿಗೂ ಹಾಡಿದ್ದಾರೆ. ರಾಮ್ ಕುಮಾರ್, ಸುಧಾರಾಣಿ ಅಭಿನಯದ ಮ್ಯೂಸಿಕಲ್ ಹಿಟ್ 'ಕಾವ್ಯ' ಚಿತ್ರದಲ್ಲೂ ಅಣ್ಣಾವ್ರು ಹಾಡಿದ್ದಾರೆ. ಶ್ರುತಿ ಅಭಿನಯದ 'ತಾಯಿ ಇಲ್ಲದ ತವರು' ಸೆಂಟಿಮೆಂಟ್ ಚಿತ್ರದಲ್ಲೂ ಅಣ್ಣಾವ್ರು ಹಾಡಿದ್ದು ಈ ಚಿತ್ರ ಕೂಡಾ ದೊಡ್ಡ ಮಟ್ಟದಲ್ಲಿ ಗೆದ್ದಿತ್ತು. ಅಲ್ಲದೆ ಶೃತಿ ಅವರ ಕೆರಿಯರನ್ನೇ ಬದಲಿಸಿತು.
![Dr Rajkumar also famous for singing](https://etvbharatimages.akamaized.net/etvbharat/prod-images/ka-bng-2-drrajkumar-hit-songs-list-special-story-images-ka10012_23052020153522_2305f_1590228322_917.jpg)
ಈ ರೀತಿ ಡಾ. ರಾಜ್ಕುಮಾರ್ ಅವರು ಅಭಿಮಾನಿಗಳ ಪಾಲಿಗೆ ಮಾತ್ರವಲ್ಲ, ನಿರ್ಮಾಪಕರ ಪಾಲಿಗೆ ಕೂಡಾ ನಾಯಕರಾಗಿ, ಗಾಯಕರಾಗಿ 'ಬಂಗಾರದ ಮನುಷ್ಯ' ಎನಿಸಿಕೊಂಡಿದ್ದಾರೆ.