ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರಗಳಲ್ಲಿ ಡಬಲ್ ಮೀನಿಂಗ್ ಸಂಭಾಷಣೆಗಳು ಬಹಳ ಹೆಚ್ಚಿರುತ್ತವೆ ಎಂಬ ಮಾತು 'ಸಿದ್ಲಿಂಗು' ಕಾಲದಿಂದಲೂ ಕೇಳಿ ಬಂದಿವೆ. ಅದರಲ್ಲೂ ಕಳೆದ ವರ್ಷ 'ಪರಿಮಳ ಲಾಡ್ಜ್' ಚಿತ್ರದ ಟೀಸರ್ ಬಿಡುಗಡೆಯಾದ ಸಂದರ್ಭದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆ ಟೀಸರ್ನಲ್ಲಿ ಸಿಕ್ಕಾಪಟ್ಟೆ ಡಬಲ್ ಮೀನಿಂಗ್ ಸಂಭಾಷಣೆಗಳನ್ನು ತುಂಬಿದ್ದು, ಆ ಬಗ್ಗೆ ವ್ಯಾಪಕ ಟೀಕೆ ಇತ್ತು.
ಆದರೆ, ಅದು ಡಬಲ್ ಮೀನಿಂಗ್ ಅಲ್ಲ, ಚೇಷ್ಟೆ ಎನ್ನುತ್ತಾರೆ ವಿಜಯಪ್ರಸಾದ್. 'ಪೆಟ್ರೋಮ್ಯಾಕ್ಸ್' ಚಿತ್ರದ ಮುಕ್ತಾಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಎಲ್ಲರೂ ನನ್ನ ಚಿತ್ರಗಳಲ್ಲಿ ಬಹಳ ಡಬಲ್ ಮೀನಿಂಗ್ ಸಂಭಾಷಣೆಗಳು ಇರುತ್ತವೆ ಎಂದು ಹೇಳಿದ್ದಾರೆ.
ನಾನದನ್ನು ಚೇಷ್ಟೆ ಅಂತಾ ಹೇಳೋಕೆ ಇಷ್ಟ ಪಡುತ್ತೇನೆ. ಮನರಂಜನೆಗೋಸ್ಕರ ಈ ಚೇಷ್ಟೆ ಇರುತ್ತದೆಯೇ ಹೊರತು, ಬೇರೆ ಯಾವುದೇ ಕಾರಣಕ್ಕೂ ಅಲ್ಲ. 'ನೀರ್ದೋಸೆ' ಚಿತ್ರವನ್ನೇ ತೆಗೆದುಕೊಂಡ್ರೆ, ಅಲ್ಲಿ ಬರೀ ಡಬಲ್ ಮೀನಿಂಗ್ ಸಂಭಾಷಣೆ ಇದ್ದಿದ್ದರೆ ಚಿತ್ರ ಫ್ಲಾಪ್ ಆಗಿರುತ್ತಿತ್ತು. ಅಲ್ಲೊಂದು ಗಾಢವಾದ ಕಥೆಯಿತ್ತು. ಅದೇ ಕಾರಣಕ್ಕೆ ಚಿತ್ರ ಗೆಲುವು ಖಂಡಿತು ಎಂದು ವ್ಯಾಖ್ಯಾನಿಸುತ್ತಾರೆ ವಿಜಯಪ್ರಸಾದ್.
ಈ ಸುದ್ದಿಯನ್ನೂ ಓದಿ: ಕನ್ನಡತಿ ಕಿರಣ್ ರಾಜ್ಗೆ ಈ ವರ್ಷ ಸುಗ್ಗಿಯೊ ಸುಗ್ಗಿ.. ಹಲವು ಸಿನಿಮಾಗಳು ತೆರೆಗೆ!
ಎಷ್ಟೇ ಒಳ್ಳೆಯ ಕಥೆ ಇದ್ದರೂ, ಚಿತ್ರ ಕಮರ್ಷಿಯಲ್ ಆಗಿರಬೇಕು ಎನ್ನುವ ವಿಜಯಪ್ರಸಾದ್, ಸಿನಿಮಾ ಯಾವತ್ತಿದ್ದರೂ ಜೂಜು. ನಿಮ್ಮ ಬಳಿ ಎಷ್ಟೇ ಒಳ್ಳೆಯ ಕಥೆ ಇದ್ದರೂ, ಅದು ಕಮರ್ಷಿಯಲ್ ಆಗಿ ಗೆಲ್ಲಬೇಕು. ಇಲ್ಲವಾದ್ರೆ, ಚಿತ್ರ ನಿರ್ಮಿಸುವುದಕ್ಕೆ ನಿರ್ಮಾಪಕರು ಸಿಗುವುದಿಲ್ಲ. ಹಾಗೆಯೇ ಇಲ್ಲಿ ಅಶ್ಲೀಲತೆಯೂ ಸರಿಯಲ್ಲ.
ಬರೀ ಗಾಢವಾದ ಕಥೆಯಷ್ಟೇ ಅಲ್ಲ, ಅದನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದಕ್ಕೆ ಈ ರೀತಿಯ ಚೇಷ್ಟೆ ಬಹಳ ಮುಖ್ಯ. ನನ್ನ ಮೊದಲ ಚಿತ್ರ ಸಿದ್ಲಿಂಗುಗೆ 11 ಪ್ರಶಸ್ತಿ ಬಂತು. ಅದರಲ್ಲಿ ನನಗೇ 5 ಪ್ರಶಸ್ತಿ ಬಂದಿದೆ. ಆದರೆ, ಅದರ ಬಳಿಕ ಮೂರು ವರ್ಷಗಳ ಕಾಲ ನಿರ್ಮಾಪಕರು ಸಿಗದೆ ಮನೆಯಲ್ಲಿ ಕುಳಿತೆ.
ಆ ನಂತರವಷ್ಟೇ ನೀರ್ ದೋಸೆ ಚಿತ್ರ ಸಾಧ್ಯವಾಯಿತು. ನಾನು ಬರೀ ಡಬಲ್ ಮೀನಿಂಗ್ ಸಂಭಾಷಣೆಗಳನ್ನು ಬರೆದು ಸಿನಿಮಾ ಮಾಡಬೇಕೆಂದಿದ್ದರೆ ವರ್ಷಕ್ಕೆ ಎರಡ್ಮೂರು ಸಿನಿಮಾಗಳನ್ನು ಸುಲಭವಾಗಿ ಮಾಡಬಹುದು ಎಂದು ಹೇಳಿದರು.