ಕರೌಲಿ (ರಾಜಸ್ಥಾನ) : ಭೂವಿವಾದ ಹಿನ್ನೆಲೆ ದೇವಾಲಯದ ಅರ್ಚಕನನ್ನು ಬೆಂಕಿ ಹಚ್ಚಿ ಕೊಲೆಗೈದಿದ್ದ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯ ಬುಕ್ನಾ ಗ್ರಾಮದಲ್ಲಿ ವಾರದ ಹಿಂದೆ ನಡೆದಿತ್ತು. ಈ ಸಂಬಂಧ ಇದೀಗ ಗ್ರಾಮದ ಮುಖಂಡರು ಪಂಚಾಯಿತಿ ನಡೆಸಿ ಆರೋಪಿಯ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ.
ಅಕ್ಟೋಬರ್ 7 ರಂದು ಘಟನೆ ನಡೆದಿದ್ದು, 24 ಗಂಟೆಗಳ ಒಳಗೇ ಪ್ರಮುಖ ಆರೋಪಿ ಕೈಲಾಶ್ ಮೀನಾ ಎಂಬವನನ್ನು ಬಂಧಿಸುವಲ್ಲಿ ಕರೌಲಿ ಪೊಲೀಸರು ಯಶಸ್ವಿಯಾಗಿದ್ದರು. ಇನ್ನೂ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
55 ವರ್ಷದ ಅರ್ಚಕ ಗ್ರಾಮದಲ್ಲಿರುವ ದೇವಸ್ಥಾನವೊಂದರ ಆವರಣದಲ್ಲಿದ್ದ ಕೃಷಿ ಜಮೀನನ್ನು ನೋಡಿಕೊಳ್ಳುತ್ತಿದ್ದರು. ಈ ಜಮೀನನ್ನು ಕೈಲಾಶ್ ಮೀನಾ ಪಡೆದುಕೊಳ್ಳಲು ಯತ್ನಿಸುತ್ತಿದ್ದನು. ಜಮೀನಿನ ಸ್ಥಳದಲ್ಲಿ ಟೆಂಟ್ ನಿರ್ಮಿಸಲು ಕೈಲಾಶ್ ಹಾಗೂ ಇತರರು ಮುಂದಾಗಿದ್ದಾರೆ. ಇದನ್ನು ತಡೆಯಲು ಬಂದ ಅರ್ಚಕನನ್ನು ಟೆಂಟ್ಗೆ ಬೆಂಕಿ ಹಚ್ಚಿ ಅದರಲ್ಲಿ ದೂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅರ್ಚಕ ಸ್ಥಳದಲ್ಲೇ ಮೃತಪಟ್ಟಿದ್ದರು.