ಕನ್ಯಾಕುಮಾರಿ: ಹೆಂಡತಿಯನ್ನು ಕುರ್ಚಿಗೆ ಕಟ್ಟಿಹಾಕಿ , ಬಾಯಿಗೆ ಬಟ್ಟೆ ತುರುಕಿ ಅಮಾನವೀಯ ರೀತಿಯಲ್ಲಿ ಹಿಂಸಿಸುತ್ತಿದ್ದ ಕ್ರೂರಿ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಸುರೇಶ್ ರಾಜನ್ ತನ್ನ ಹೆಂಡತಿಯನ್ನು ಹೊರಗೆ ಬಿಡದೇ ಕುರ್ಚಿಗೆ ಕಟ್ಟಿಹಾಕಿ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಮನೆಯಿಂದ ಹೊರ ಬರುತ್ತಿದ್ದ ಆಕೆಯ ಅಳುವಿನ ಶಬ್ಧ ಕೇಳಿ ನೆರೆ ಹೊರೆ ಮನೆಯವರು ಧಾವಿಸಿದ್ದಾರೆ. ಆದರೆ ಮನೆ ಒಳಗಿನಿಂದ ಲಾಕ್ ಆಗಿದ್ದ ಕಾರಣ ಒಳ ಹೋಗಲಾಗದೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸಾರ್ವಜನಿಕರ ಮಾಹಿತಿ ಆಧಾರದ ಮೇಲೆ ಎಸ್ಐ ಸುಜಿತ್ ಆನಂದ್ ಸ್ಥಳಕ್ಕೆ ಆಗಮಿಸಿದ್ದಾರೆ. ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ ಬಾಗಿಲು ಮುರಿದು ಒಳಹೋಗಿ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪೊಲೀಸರು ಮನೆಯ ಕದ ಮುರಿದು ಒಳಗೆ ಹೋಗುವುದು ಹಾಗೂ ಆರೋಪಿ ಸುರೇಶ್ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಮನೆಯ ಹಾಲ್ನಲ್ಲಿ ಆಕೆಯನ್ನು ಚೇರ್ಗೆ ಕಟ್ಟಿ ಹಾಕಿರುವ ದೃಶ್ಯ ಕಂಡು ಬಂದಿದೆ, ಆಕೆಯ ಬಾಯಿಗೂ ಬಟ್ಟೆ ತುರುಕಲಾಗಿದೆ. ನಂತರ ಪೊಲೀಸರು ಆಕೆಗೆ ಕಟ್ಟಿದ್ದ ಬಟ್ಟೆಯ ಗಂಟನ್ನು ತೆಗೆದು ರಕ್ಷಿಸಿದ್ದಾರೆ. ಆರೋಪಿ ಪತಿ ಆಕೆಯ ಮೇಲೆ ಸೀಮೆಎಣ್ಣೆ ಕೂಡ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಡನ ಚಿತ್ರಹಿಂಸೆಯಿಂದ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸುರೇಶ್ ರಾಜನ್ನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.307(Attempt to murder)ಅಡಿ ಆರೋಪಿ ವಿರುದ್ಧ ಕೇಸ್ ದಾಖಲಿಸಲಾಗಿದೆ.