ಝಪೋರಿಝಿಯಾ, ಉಕ್ರೇನ್: ಇಲ್ಲಿನ ಪರಮಾಣು ಸ್ಥಾವರದ ಸುತ್ತಲಿನ ರಷ್ಯಾ ಮಿಲಿಟರಿ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಆ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನಡೆಯುತ್ತಿರುವ ಶೆಲ್ ದಾಳಿಯ ಸಂಭವನೀಯ ಅಪಾಯಗಳ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ಎಚ್ಚರಿಕೆ ನೀಡಿದ್ದಾರೆ.
ಯುರೋಪ್ನ ಅತಿದೊಡ್ಡ ಪರಮಾಣು ಸ್ಥಾವರವಾದ ಝಪೋರಿಝಿಯಾ ಪರಮಾಣು ಸ್ಥಾವರವನ್ನು ಮಾರ್ಚ್ನಿಂದ ರಷ್ಯಾ ಆಕ್ರಮಿಸಿಕೊಂಡಿದೆ. ಕಳೆದ ವಾರ ನಡೆದ ದಾಳಿಯಲ್ಲಿ ಬಾಹ್ಯ ವಿದ್ಯುತ್ ಸರಬರಾಜು ವ್ಯವಸ್ಥೆಗಳು ಹಾನಿಗೊಳಗಾಗಿವೆ. ಬೆಳೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಆಂಟೋನಿಯೊ ಗುಟೆರೆಸ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಥಾವರದ ಸುತ್ತಮುತ್ತಲಿನ ರಷ್ಯಾ ಮಿಲಿಟರಿ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ನಾನು ಕರೆ ನೀಡುತ್ತೇನೆ. ಸ್ಥಾವರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳೊಳಗಿನ ಸೌಲಭ್ಯಗಳನ್ನು ಗುರಿಯಾಗಿಸಿ ತಮ್ಮ ಮಿಲಿಟರಿ ಚಟುವಟಿಕೆ ನಡೆಸಬಾರದು ಎಂದು ಅವರು ರಷ್ಯಾಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಪರಮಾಣು ಸ್ಥಾವರದ ಮೇಲಿನ ಎಲ್ಲ ಮಿಲಿಟರಿ ಸಿಬ್ಬಂದಿ ಮತ್ತು ಉಪಕರಣಗಳನ್ನು ತೆಗೆದುಹಾಕಲು ಮತ್ತು ಆ ಸ್ಥಳದಲ್ಲಿ ಯಾವುದೇ ಹೆಚ್ಚಿನ ಪಡೆಗಳು ಅಥವಾ ಉಪಕರಣಗಳನ್ನು ನಿಯೋಜಿಸುವುದನ್ನು ತಪ್ಪಿಸಲು ನಾನು ಒತ್ತಾಯಿಸುತ್ತೇನೆ. ಅಷ್ಟೇ ಅಲ್ಲ ಈ ಸ್ಥಾವರವನ್ನು ಯಾವುದೇ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಬಳಸಬಾರದು. ಬದಲಿಗೆ, ಆ ಪ್ರದೇಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಸುರಕ್ಷಿತ ಸೇನಾನಿವಾರಣೆಯ ತಾಂತ್ರಿಕ ಮಟ್ಟದಲ್ಲಿ ತುರ್ತು ಒಪ್ಪಂದದ ಅಗತ್ಯವಿದೆ ಎಂದು ಯುಎನ್ ಗುಟೆರಸ್ ಹೇಳಿದರು.
ದೇಶಗಳ ಸಾರ್ವಭೌಮತೆಗೆ ಬೆಲೆ ನೀಡಿ: ಯಾವುದೇ ರಾಷ್ಟ್ರದ ವಿರುದ್ಧ ಕ್ರಮಕೂಗೊಳ್ಳುವ ಮುನ್ನ ಅಂತರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆ ಚಾರ್ಟರ್ ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ರಾಜ್ಯಗಳ ಸಾರ್ವಭೌಮತ್ವವಕ್ಕೆ ಗೌರವ ನೀಡುವ ಮೂಲಕ ಸೂಕ್ತ ಕಾನೂನು ಕ್ರಮಕ್ಕೆ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಪ್ರತಿಪಾದಿಸಿದೆ.
ಉಕ್ರೇನ್ನಲ್ಲಿನ ಪರಿಸ್ಥಿತಿಯ ಬಗ್ಗೆ ಭಾರತವೂ ಕಳವಳ ವ್ಯಕ್ತಪಡಿಸಿದೆ. ಈ ವಿಷಯದ ಮೇಲೆ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ರಾಯಭಾರಿ, ರುಚಿರಾ ಕಾಂಬೋಜ್, ಯುದ್ಧ ಆರಂಭದ ದಿನದಿಂದಲೂ ಭಾರತವು ತಕ್ಷಣವೇ ಯುದ್ಧ ನಿಲ್ಲಿಸಲು ಮತ್ತು ಹಿಂಸಾಚಾರ ಕೊನೆಗೊಳಿಸಲು ನಿರಂತರವಾಗಿ ಕರೆ ನೀಡಿದೆ. ಸಂಘರ್ಷವನ್ನು ಕೊನೆಗೊಳಿಸುವ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಭಾರತ ಹೇಳಿದೆ ಎಂದು ಪ್ರತಿಪಾದಿಸಿದರು.
ಯುದ್ಧಕ್ಕೆ 5 ತಿಂಗಳು: ಫೆಬ್ರವರಿ 24 ರಿಂದ ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದೆ. ಉಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ಧ ಪ್ರಾರಂಭವಾಗಿ ಇಂದಿಗೆ ಐದು ತಿಂಗಳು, ಎರಡು ವಾರ, ಐದು ದಿನಗಳ ಕಳೆದಿವೆ. ಸಾವಿರಾರೂ ಮಕ್ಕಳು ಅನಾಥರಾಗಿದ್ದಾರೆ. ಸೈನಿಕರು ಸೇರಿದಂತೆ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೋಟ್ಯಾಂತರ ಜನ ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಅದೆಷ್ಟೋ ಜನ ಈ ಯುದ್ಧದಿಂದ ಅಂಗವಿಕಲರಾಗಿದ್ದಾರೆ. ಆಹಾರ, ನೀರು ಇಲ್ಲದೇ ಅಲ್ಲಿನ ಜನ ನರಳಾಡುತ್ತಿದ್ದಾರೆ. ಎರಡು ದೇಶಗಳಲ್ಲಿ ಆರ್ಥಿಕ ಪರಿಸ್ಥಿತಿ ನೆಲಕ್ಕಚ್ಚಿದೆ. ಇದರಿಂದ ಪ್ರಪಂಚದ ಆರ್ಥಿಕ ವ್ಯವಸ್ಥೆಯಲ್ಲಿಯೂ ತಲ್ಲಣ ಮೂಡಿಸಿದೆ. ಆದ್ರೂ ಸಹ ಯುದ್ಧ ಮಾತ್ರ ನಿಲ್ಲುವಂತೆ ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಯುದ್ಧ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದು ಕಾದು ನೋಡ್ಬೇಕಾಗಿದೆ.
ಓದಿ: ಉಕ್ರೇನ್ ಆಹಾರ ಕೊರತೆ ನೀಗಿಸಲು ಹಲವು ದೇಶಗಳ ನೆರವು