ಮಂಡ್ಯ : ಪಾಂಡವಪುರ ತಾಲೂಕಿನಲ್ಲಿ ಮೂರು ದಿನಗಳ ಕಾಲ ನಡೆದ ಪುನೀತೋತ್ಸವ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ತೆರೆ ಕಂಡಿತು.
ಕರುನಾಡು ಇಂದು ಎಂದೆಂದೂ ಮರೆಯದ ಅಮೂಲ್ಯವಾದ ರತ್ನ ಅಂದರೇ ಅದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಅಪ್ಪು ಮೇಲಿನ ಅಭಿಮಾನ ಕರುನಾಡ ಜನರಿಗೆ ಎಂದು ಕಡಿಮೆಯಾಗಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದು ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದ ಪುನೀತೋತ್ಸವ.
ಕಳೆದ ಮೂರು ದಿನಗಳಿಂದ ನಡೆದ ಮೇಲುಕೋಟೆ ಶಾಸಕ ಪುಟ್ಟರಾಜು ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಪುನೀತೋತ್ಸವ ಅದ್ದೂರಿಯಾಗಿ ಅಚ್ಚುಕಟ್ಟಾಗಿ ಸಮಾರೋಪಗೊಂಡಿತು. ಪುನೀತೋತ್ಸವದ ಅಂತಿಮ ದಿನವಾದ ಭಾನುವಾರ ರಾತ್ರಿ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ನೆರದಿದ್ದ ಸಾವಿರಾರು ಜನರು ಅಕ್ಷರಶಃ ಪುನೀತ್ ಅವರ ನಾಮ ಸ್ಮರಣೆ ಮಾಡಿದರು. ವಿಲಾಸ್ ನಾಯಕ್ ತಂಡ ಬ್ಯಾಂಡ್ ಕಲಾವಿದರು ಬ್ಯಾಂಡ್ ಬಾರಿಸಿದರೇ, ಅತ್ತ ಕಲಾವಿದನ ಕುಂಚದಲ್ಲಿ ಅಪ್ಪುವಿನ ಭಾವಚಿತ್ರ ಅರಳುವ ಮೂಲಕ ಪುನೀತೋತ್ಸವದ ಮೂರನೇ ದಿನಕ್ಕೆ ಚಾಲನೆ ಸಿಕ್ಕಿತು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿದ್ದು ಆಂಕರ್ ಅನುಶ್ರೀ.
ಬಳಿಕ ವೇದಿಕೆಗೆ ಅಪ್ಪು ಸಾಂಗ್ಗಳೊಂದಿಗೆ ಎಂಟ್ರಿಕೊಟ್ಟ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡದ ಸಖ್ಖತ್ ಸ್ಟೇಪ್ಸ್, ನೆರೆದಿದ್ದ ಪುನೀತ್ ಫ್ಯಾನ್ಸ್ ಕುಣಿದು ಕುಪ್ಪಳಿಸಿದರು. ಕಿರುತೆರೆ ನಟಿಯರಾದ ವೈಷ್ಣವಿ, ಶರ್ಮಿತಾಗೌಡ ಡ್ಯಾನ್ಸ್ ನೋಡಿದ ಯುವಕರು ಫುಲ್ ಫಿದಾ ಆದರು. ಮತ್ತೆ ಮಜಾ ಭಾರತದ ಜಗಪ್ಪ ಅಂಡ್ ಟೀಮ್ ನೆರೆದಿದ್ದವರಿಗೆ ನಗುವಿನ ಟಾನಿಕ್ ಕೊಟ್ಟರು.
ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಗೊಂಬೆ ಹೇಳುತೈತೆ: ಇದಾದ ನಂತರ ವೇದಿಕೆಗೆ ನಮಸ್ಕಾರ ಪಾಂಡವಪುರ ಎಂದು ಎಂಟ್ರಿಕೊಟ್ಟ ಗಾಯಕ ವಿಜಯ್ ಪ್ರಕಾಶ್ ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂದು ಹಾಡಿ ನೆರೆದಿದ್ದ ಸಾವಿರಾರು ಜನರು ತಲೆ ದೂಗುವಂತೆ ಮಾಡಿದರು. ಜೊತೆಗೆ ಅಪ್ಪು ಫೋಟೋ ಹಿಡಿದು ತಾವು ಸಹ ಧ್ವನಿಗೂಡಿಸಿದರು. ವಿಜಯ್ ಪ್ರಕಾಶ್ ಪುನೀತೋತ್ಸವದ ಉದಕ್ಕೂ ತಮ್ಮ ಕಂಚಿನ ಕಂಠದ ಮೂಲಕ ಜನರನ್ನು ರಂಜಿಸುವುದರ ಜೊತೆಗೆ ಅಪ್ಪುವನ್ನು ಸ್ಮರಿಸಿದರು. ಇನ್ನೂ ಗಾಯಕಿ ಮಂಗ್ಲಿ ಹಾಡಿಗೆ ನೆರೆದಿದ್ದ ಜನರು ಹುಚ್ಚೆದ್ದು ಕುಣಿದರು.
ಪುನೀತೋತ್ಸವದ ವೇದಿಕೆಯಲ್ಲಿ 125ನೇ ಸಿನಿಮಾವಾದ ವೇದ ಚಿತ್ರದ ಗಿಲಕ್ಕು ಶಿವ ಗಿಲ್ಲಕ್ಕೋ, ಗಿಲ ಗಿಲ ಗಿಲಕ್ಕೋ ಎಂಬ ಸಾಂಗ್ ಅನ್ನು ರಿಲೀಸ್ ಮಾಡಲಾಯಿತು. ಸಾಂಗ್ ಮುಗಿದ ಬಳಿಕ ವೇದಿಕೆಗೆ ಎಂಟ್ರಿಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ ವೇದ ಚಿತ್ರದ ಕುರಿತು ಮಾತನಾಡಿದರು.
ಅಪ್ಪು ಅಪ್ಪು ಜಯಘೋಷ: ಈ ವೇಳೆ ವೇದ ಚಿತ್ರ ತಂಡ ನಿರ್ದೇಶಕ ಹರ್ಷ, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಹಾಗೂ ನಟರು ವೇದ ಚಿತ್ರದ ಕುರಿತು ಮಾತನಾಡುವಾಗ ನೆರದಿದ್ದ ಜನರು ಅಪ್ಪು ಅಪ್ಪು ಎಂದು ಕೂಗಿದರು. ಈ ವೇಳೆ ಶಿವಣ್ಣ ಎದೆಗೆ ಕೈಯಲ್ಲಿ ಹೊಡೆದುಕೊಂಡು ಅಪ್ಪು ಇಲ್ ಇದಾನ್ರಪ್ಪಾ, ಯಾವಾಗಲೂ ಹೃದಯದಲ್ಲಿ ಅಪ್ಪು ಇರುತ್ತಾನೆ. ಅಪ್ಪು ಅಮಾರ ದಿಲ್ ಹೇ ಎಂದು ಶಿವಣ್ಣ ಭಾವುಕರಾಗಿ ಹೇಳಿದರು.
ನಂತರ ಜನರ ಒತ್ತಾಯದ ಮೇರೆ ವಜ್ರಕಾಯ ಚಿತ್ರದ ಒಂದು ಒಳ್ಳೆ ಸೂಚನೆ ಹಾಡನ್ನು ಶಿವಣ್ಣ ಅರ್ಜುನ್ ಜನ್ಯ ಜೊತೆಗೂಡಿ ಹಾಡಿ, ಟಗರು ಬಂತು ಟಗರು ಸಾಂಗ್ಗೆ ಶಿವಣ್ಣ ಭರ್ಜರಿ ಸ್ಟೇಪ್ ಸಹ ಹಾಕಿದರು.
ಒಟ್ಟಾರೆ ಪಾಂಡವಪುರದಲ್ಲಿ ಮೂರು ದಿನಗಳ ಕಾಲ ನಡೆದ ಪುನೀತೋತ್ಸವದಲ್ಲಿ ಅಪ್ಪುವಿನ ಜಪದೊಂದಿಗೆ ಸಮಾರೋಪಗೊಳ್ಳುವುದರ ಜೊತೆಗೆ ಅಪ್ಪು ಎಂದೆಂದಿಗೂ ನಮ್ಮೊಂದಿಗೆ ಶಾಶ್ವತವಾಗಿ ಇರುತ್ತಾರೆ ಎಂದು ಈ ಕಾರ್ಯಕ್ರಮ ನಿರೂಪಿಸಿತು.
ಇದನ್ನೂ ಓದಿ :ಪಾಂಡವಪುರದಲ್ಲಿ ಪುನೀತೋತ್ಸವ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ