ರಿಷಿಕೇಶ್ (ಉತ್ತರಾಖಂಡ್) ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಮಾನುಷಿ ಛಿಲ್ಲರ್ ಅವರು ರಿಷಿಕೇಶ್ ಪರಮಾರ್ಥ ನಿಕೇತನಕ್ಕೆ ಭೇಟಿ ನೀಡಿ, ನಿಕೇತನ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಸಾಧ್ವಿ ಭಗವತಿ ಅವರ ಆಶೀರ್ವಾದ ಪಡೆದರು. ಈ ವೇಳೆ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರುದ್ರಾಕ್ಷಿ ಗಿಡ ಪಡೆದು, ಗಂಗಾನದಿಯಲ್ಲಿ ಸಮರ್ಪಿಸಿ ನಮಸ್ಕರಿಸಿದರು.
ದೇಶಕ್ಕೆ ಮಹಿಳೆಯರ ಕೊಡುಗೆ ಅಪಾರ: ಈ ವೇಳೆ ಸ್ವಾಮಿ ಚಿದಾನಂದ ಸರಸ್ವತಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಅಗತ್ಯವಿದೆ., ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಸ್ವತಂತ್ರವಾಗಿ ಹಾರಲು ತೆರೆದ ಆಕಾಶ ಇರಬೇಕು. ಭಾರತದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಿದ್ದು, ಈ ಕೂಡುಗೆಯನ್ನು ನಿರ್ಲಕ್ಷಿಸುವುದು ಸಮಂಜಸವಲ್ಲ ಎಂದು ಹೇಳಿದರು.
ಸಮಾನತೆ ಇರುವಲ್ಲಿ ಪ್ರಗತಿ ಸುಲಭ : ನಟಿ ಮಾನುಷಿ ಛಿಲ್ಲರ್ ಮಾತನಾಡಿ, ಮಗ ಮತ್ತು ಮಗಳು ಇಬ್ಬರೂ ಸಮಾನವಾಗಿ ಸಮಾಜದ ಅವಿಭಾಜ್ಯ ಅಂಗಗಳಿದ್ದಂತೆ. ಸಮಾಜದ ಪ್ರಗತಿಯಲ್ಲಿ ಇಬ್ಬರ ಸಮಾನ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಸೇರಿದಂತೆ ಇತರ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅಗತ್ಯವಿದೆ ಎಂದು ಸಮಾನತೆಯನ್ನು ಪ್ರತಿಪಾದಿಸಿದರು.
ಶಿಕ್ಷಣದಿಂದ ಅನಿಷ್ಟ ಪದ್ಧತಿ ದೂರ: ಯಾವುದೇ ಒಂದು ಕಡೆ ದುರ್ಬಲವಾಗಿದ್ದರೆ ಸಾಮಾಜಿಕ ಪ್ರಗತಿ ಸಾಧ್ಯವಿಲ್ಲ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಭಾರತದಲ್ಲಿ ವರದಕ್ಷಿಣೆ ವ್ಯವಸ್ಥೆ, ಹೆಣ್ಣು ಭ್ರೂಣ ಹತ್ಯೆ, ಲಿಂಗ ಅಸಮಾನತೆ ಮತ್ತು ದಬ್ಬಾಳಿಕೆ ಮುಂತಾದ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಬಹುದು.
ಸಸ್ಯಾಹಾರ ಯೋಗ ಫಿಟ್ನೆಸ್ ರಹಸ್ಯ : ಸಸ್ಯಾಹಾರ ಮತ್ತು ಯೋಗ ನನ್ನ ಒಟ್ಟಾರೆ ಫಿಟ್ನೆಸ್ನ ರಹಸ್ಯವಾಗಿದೆ ಎಂದು ನಟಿ ಮಾನುಷಿ ಛಿಲ್ಲರ್ ಹೇಳಿದ್ದಾರೆ. ಅವರು ನಟಿಸಲಿರುವ ಮುಂದಿನ ಟೆಹ್ರಾನ್ ಸಿನಿಮಾ ಗಾಗಿ ಸ್ವಾಮಿ ಚಿದಾನಂದ ಅವರಿಂದ ನಟಿ ಛಿಲ್ಲರ್ ಆಶೀರ್ವಾದ ಪಡೆದರು.
ಇದನ್ನೂ ಓದಿ:ಪ್ರಧಾನಿ ಮೋದಿ ಮತ್ತು ಪವನ್ ಕಲ್ಯಾಣ ಭೇಟಿ.. ಆಂಧ್ರಪ್ರದೇಶ ರಾಜಕೀಯದಲ್ಲಿ ಕುತೂಹಲ