ಧಾರವಾಡ: ಕುಮಾರಸ್ವಾಮಿ ಅವರಿಗೆ ತಲೆ ಕೆಟ್ಟಿದೆ ಅಂತಾ ಕಾಣುತ್ತೆ. ಪುಲ್ವಾಮಾ ದಾಳಿ ಮೊದಲೇ ಗೊತ್ತಿತ್ತು ಎನ್ನುವುದು ದೇಶದ್ರೋಹದ ಕೆಲಸವಲ್ಲವಾ? ಇಂತಹ ಮುಖ್ಯಮಂತ್ರಿಯನ್ನು ಸಹಿಸೋದು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಸಿಎಂ ವಿರುದ್ಧ ಕಿಡಿಕಾರಿದರು.
ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರವಾಗಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ 5 ವರ್ಷ ಹಿಂದಕ್ಕೆ ಹೋಗಿದೆ. 37 ಸೀಟು ಗೆದ್ದವರು ಸಿಎಂ ಆಗಿದ್ದಾರೆ. ನಾವೆಲ್ಲಾ ವಿರೋಧ ಪಕ್ಷದಲ್ಲಿ ಇದ್ದೇವೆ. ಬದಲಾವಣೆ ದೃಷ್ಟಿಯಿಂದ 22 ಲೋಕಸಭೆ ಸೀಟುಗಳನ್ನು ಗೆಲ್ಲುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಒಪ್ಪಿಕೊಂಡಿದ್ದಾರೆ. ಮೋದಿ ಅವರು ದೇಶದ ನದಿಗಳ ಜೋಡಣೆಯಲ್ಲಿ ಕ್ರಾಂತಿಕಾರಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ನಾಯಕರು ಮನೆ ಹಾದಿ ಹಿಡಿಯಲಿದ್ದಾರೆ. ನಮ್ಮ ಅಭ್ಯರ್ಥಿಗಳು ಜಯ ಸಾಧಿಸಿ ಕಾಂಗ್ರೆಸ್ - ಜೆಡಿಎಸ್ ನಾಯಕರಿಗೆ ಟಾಂಗ್ ನೀಡುವರು ಎಂದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ, ಟೋಪಿ ಹಾಕುವ ದಂಧೆಯನ್ನು ಈ ದೇಶದಲ್ಲಿ ಮಾಡಿದ್ದು ಯಾರು ಅಂದ್ರೆ ಅದು ಕಾಂಗ್ರೆಸ್ ಸರ್ಕಾರ. ಕಾಯಕ ಯೋಗಿ ನರೇಂದ್ರ ಮೋದಿ ಅವರು. 5 ವರ್ಷಗಳ ಕಾಲ 24/7 ಗಂಟೆ ಕೆಲಸ ಮಾಡಿದ್ದಾರೆ. ಇನ್ನು 5 ವರ್ಷ ಮುಂದುವರೆಯಲಿ. ಕಾಂಗ್ರೆಸ್ನವರು ರಣಹೇಡಿಗಳು. ಅವರನ್ನು ಮನೆಗೆ ಕಳುಹಿಸಿ ಎಂದು ಜೋಶಿ ಕಿಡಿಕಾರಿದರು.
ಮಾಜಿ ಸಿಎಂ ಜಗದೀಶ್ ಶೇಟ್ಟರ್ ಮಾತನಾಡಿ, ದೇಶದ ರಕ್ಷಣೆಗಾಗಿ ನರೇಂದ್ರ ಮೋದಿ ಬೇಕು. ಪುಲ್ವಾಮಾ ಯಶಸ್ವಿ ದಾಳಿ ಮತ್ತು ಅಭಿನಂದನ್ ಹಸ್ತಾಂತರ ಇವೆರಡು ಮೋದಿಯ ಮಹಾ ನಾಯಕತ್ವಕ್ಕೆ ಸಾಕ್ಷಿ. ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಮೋದಿ ಆಡಳಿತದ ಬಗ್ಗೆ ಗೊತ್ತಾಗಿದೆ. ಅದರೆ ಕಾಂಗ್ರೆಸ್ನವರಿಗೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.