ತುಮಕೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಬರೋಬ್ಬರಿ 88 ಅಪಘಾತ ವಲಯಗಳನ್ನು ಗುರುತಿಸಿದೆ. ಅಲ್ಲದೇ ಅವುಗಳನ್ನು ಬ್ಲಾಕ್ ಸ್ಪಾಟ್ಗಳೆಂದು ಘೋಷಣೆ ಮಾಡಿದೆ.
ಬಹುತೇಕ ಉತ್ತರ ಕರ್ನಾಟಕ ಹಾಗೂ ಹಾಸನ, ಮಂಗಳೂರು ಭಾಗದಿಂದ ರಾಜಧಾನಿ ಬೆಂಗಳೂರು ತಲುಪಬೇಕೆಂದರೆ ತುಮಕೂರು ಜಿಲ್ಲೆಯನ್ನು ದಾಟಿ ಹೋಗಬೇಕು. ಜಿಲ್ಲೆಯಲ್ಲಿ ಕಳೆದ ವರ್ಷ 766 ಅಪಘಾತಗಳು ಸಂಭವಿಸಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕಳೆದ ಎಂಟು ತಿಂಗಳಿನಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ನೇತೃತ್ವದಲ್ಲಿ ಜಿಲ್ಲಾದ್ಯಂತ ಸಮೀಕ್ಷೆ ಮಾಡಲಾಗಿದೆ. ಮೂರು ಬಾರಿ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆ ನಡೆಸಿ 88 ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದೆ. ಅಪಘಾತಗಳು ನಡೆಯುವ 500 ಮೀಟರ್ ಸುತ್ತಳತೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಹಾಸನ ಮತ್ತು ಮಂಗಳೂರು ಜಿಲ್ಲೆಯಿಂದ ಬೆಂಗಳೂರಿಗೆ ತೆರಳುವಂತಹ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅತಿಹೆಚ್ಚು ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದಿಂದ ಬೆಂಗಳೂರು ತಲುಪುವಂತಹ ರಾಷ್ಟ್ರೀಯ ಹೆದ್ದಾರಿ 48ರಲ್ಲಿಯೂ ಅನೇಕ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ನಿರಂತರವಾಗಿ ಪೊಲೀಸರನ್ನು ರಾತ್ರಿ ಹಾಗೂ ಹಗಲು ವೇಳೆ ಪಾಟ್ರೋಲಿಂಗ್ ಮಾಡಲು ಸೂಚಿಸಲಾಗಿದೆ.
ಒಟ್ಟಾರೆ ತುಮಕೂರು ಜಿಲ್ಲೆಯಲ್ಲಿ ಅಪಘಾತಗಳಿಂದ ಸಾವು-ನೋವುಗಳಿಗೆ ತುತ್ತಾಗುತ್ತಿರುವ ಪ್ರಯಾಣಿಕರನ್ನು ಪಾರು ಮಾಡಲು ಜಿಲ್ಲಾ ಪೊಲೀಸ್ ಇಲಾಖೆ 88 ಬ್ಲಾಕ್ ಸ್ಪಾಟ್ಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ.