ತುಮಕೂರು: ಬಿಟ್ ಕಾಯಿನ್ ಪ್ರಕರಣದ (Karnataka Bitcoin scam) ತನಿಖೆ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆಯಾ ಅನ್ನೋದೇ ಯಾವತ್ತೂ ದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ (Former DCM Dr.G.Parameshwar) ಅನುಮಾನ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆಯಲ್ಲಿ ಮಾತನಾಡಿದ ಅವರು, ನಾನೂ ಪೊಲೀಸ್ ಇಲಾಖೆಯನ್ನು ನಿರ್ವಹಿಸಿದವನು. ಆ ಕಡೆ ನಿಂತು ನೋಡಿದಾಗ ಬೇರೆ ಚಿತ್ರ ಕಾಣಿಸುತ್ತೆ ನಮಗೆ. ಬಿಟ್ ಕಾಯಿನ್ ದಂಧೆಯಲ್ಲಿ (Karnataka Bitcoin scam) ಯಾರಿದ್ದಾರೆ, ಯಾರಿಲ್ಲ ಅನ್ನುವ ಊಹಾಪೋಹ ನಡೀತಿದೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಇದ್ದಾರೆ ಎಂದು ಹೇಳುತ್ತಿದ್ದಾರೆ. ತನಿಖೆ ಸಂಪೂರ್ಣ ಆದ ಬಳಿಕ ಗೊತ್ತಾಗಲಿದೆ. ಆದರೆ ಈ ಭಾಗದಲ್ಲಿ ನಿಂತು ನೋಡಿದಾಗ ತನಿಖೆ ಮಾಡೋರು ಸರಿಯಾಗಿ ಮಾಡ್ತಾರಾ ಎಂಬ ಪ್ರಶ್ನೆ ಮಾಡುತ್ತೇವೆ ಎಂದರು.
ಈ ವ್ಯವಸ್ಥೆ ಬಗ್ಗೆ ವಿಶ್ವಾಸ ಬಹಳ ಮುಖ್ಯ. ವಿಶ್ವಾಸದೊಂದಿಗೆ ತನಿಖೆ ಯಾವ ರೀತಿ ಬರುತ್ತೆ ಎಂದು ಕಾದುನೋಡೋಣ. ಬಿಟ್ ಕಾಯಿನ್ ದಂಧೆ (Bitcoin scam) ಅಂತಾರಾಷ್ಟ್ರೀಯ ಮಟ್ಟದ್ದು. ಬರೀ ನ್ಯಾಷನಲ್ ಲೆವಲ್ ಆಗಿದ್ದರೆ ಏನಾದರೂ ಅನುಮಾನ ಮಾಡಬಹುದಿತ್ತು. ಮುಚ್ಚಿ ಹಾಕ್ತಾರೆ ಎಂದು ಹೇಳಬಹುದಿತ್ತು ಎಂದಿದ್ದಾರೆ.
ಹ್ಯಾಕಿಂಗ್ (Hacking) ಬರೀ ಇಂಡಿಯಾದಲ್ಲಿ ಆಗಲಿಲ್ಲ. ಇಂಟರ್ ನ್ಯಾಷನಲ್ ಲೆವಲ್ ಅಲ್ಲಿ ಆಗಿದೆ. ನಮ್ಮಲ್ಲಿ ಬಿಗಿಯಾದ ಸೈಬರ್ ಕಾನೂನು (Cyber law) ಇಲ್ಲ. ಸೈಬರ್ ಕಾನೂನಿನ ವ್ಯಾಪ್ತಿ ಇನ್ನೂ ಅಂತಿಮವಾಗಿಲ್ಲ. ಯಾವುದು ಲೀಗಲ್ ಯಾವುದು ಇಲ್ ಲೀಗಲ್ ಅನ್ನೋದು ಇನ್ನೂ ಅಂತಿಮ ಆಗಿಲ್ಲ. ಸಿಆರ್ಪಿಸಿಯಲ್ಲಿ (CRPC) ಇವೆಲ್ಲ ಬರೋದಿಲ್ಲ. ಸರ್ಕಾರ ಯಾವ ರೀತಿ ತನಿಖೆ ನಡೆಸುತ್ತೆ ಎಂದು ಕಾದು ನೋಡೋಣ ಎಂದು ಹೇಳಿದರು.