ತುಮಕೂರು: ಕೊರೊನಾ ತಡೆಗಟ್ಟಲು ಸರ್ಕಾರ ನಾನಾ ರೀತಿಯ ಕಸರತ್ತು ನಡೆಸುತ್ತಿದೆ. ಈ ನಡುವೆ ಆಯುಷ್ ಇಲಾಖೆ ವತಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಯಡಿ ತುಮಕೂರು ಜಿಲ್ಲೆಯಾದ್ಯಂತ 50,000 ಕಿಟ್ಗಳನ್ನು ವಿತರಿಸಲಾಗುತ್ತಿದೆ.
![Distribution of 50,000 Kits to Tumkur District by AYUSH Department](https://etvbharatimages.akamaized.net/etvbharat/prod-images/kn-tmk-02-ayushmedicin-vis-7202233_20072020201517_2007f_03238_96.jpg)
ಕೊರೊನಾ ವಾರಿಯರ್ಸ್ಗಳಿಗೆ, ಮಕ್ಕಳಿಗೆ, ವಯೋವೃದ್ಧರಿಗೆ, ಸೋಂಕಿತರ ಸಂಪರ್ಕ ಹೊಂದಿದವರಿಗೆ ಮತ್ತು ಅಗತ್ಯ ಎನಿಸಿದವರಿಗೆ ರೋಗ ನಿರೋಧಕ ಔಷಧಿಯ ಕಿಟ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜಿಲ್ಲೆಯ 10 ತಾಲೂಕುಗಳಿಗೆ ಸಮನಾಗಿ ಆಯುಷ್ ಕಿಟ್ಗಳನ್ನು ವಿತರಣೆ ಮಾಡಲಾಗಿದೆ. ಕಿಟ್ನಲ್ಲಿ ಮೂರು ತರಹದ ಔಷಧಿಗಳು ಇರಲಿವೆ. ಅದರಲ್ಲಿ ಹೋಮಿಯೋಪತಿ ಔಷಧಿಯಾದ ಆರ್ಸನಿಕ್ ಆಲ್ಬಂ ಎಂಬ 10 ಮಾತ್ರೆಗಳಿರುತ್ತವೆ. ಅಮೃತಬಳ್ಳಿಯ ಔಷಧೀಯ ಗುಣವುಳ್ಳ ಸಂಶಮಣಿ ವಟಿ ಎಂಬ ಮಾತ್ರೆಗಳು ಕೂಡ ಇರಲಿವೆ. ಇದು ಮನುಷ್ಯನ ದೇಹದಲ್ಲಿ ಜ್ವರ, ಶೀತ, ಕೆಮ್ಮಿನಂತಹ ರೋಗಗಳನ್ನು ನಿವಾರಣೆ ಮಾಡಲಿದೆ.
ಇದರಲ್ಲಿ ಅರ್ಕ ಅಜೀಬ್ ಎಂಬ ದ್ರಾವಣವಿದ್ದು, ಇದನ್ನು ಕರ್ಚಿಫ್ ಮತ್ತು ಮಾಸ್ಕ್ ಗಳಿಗೆ ದಿನಕ್ಕೆ ಒಮ್ಮೆ ಸಿಂಪಡಣೆ ಮಾಡಿ ಬಳಸಿಕೊಳ್ಳಬಹುದಾಗಿದೆ. ಇದರಿಂದ ವೈರಸ್ಗಳು ನೇರವಾಗಿ ಬಾಯಿ ಹಾಗೂ ಮೂಗಿನ ಮೂಲಕ ಮನುಷ್ಯನ ದೇಹವನ್ನು ಸೇರುವುದನ್ನು ತಡೆಗಟ್ಟಬಹುದಾಗಿದೆ ಎಂದು ಆಯುಷ್ ಇಲಾಖೆಯ ವೈದ್ಯ ಡಾ. ಸಂಜೀವ ಮೂರ್ತಿ ತಿಳಿಸಿದ್ದಾರೆ.