ಮೈಸೂರು: ಯುವಕನ ಅಪಹರಣ ಪ್ರಕರಣವನ್ನು ಒಂದೇ ಗಂಟೆಯಲ್ಲಿ ಭೇದಿಸಿ, ಆರೋಪಿಗಳನ್ನು ಹಿಡಿಯುವಲ್ಲಿ ಆಲನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವೇಂದ್ರನಗರದ ಯಶವಂತ್ (21) ಎಂಬ ಯುವಕನನ್ನು ಆರೋಪಿಗಳು ಅಪಹರಿಸಿದ್ದರು. ಈತ ಡಿ.1 ರಂದು 12 ಗಂಟೆ ಸಮಯದಲ್ಲಿ ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಿ ಹೊರ ಬರುತ್ತಿರುವಾಗ, ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಮಂಜುನಾಥ್, ನಾಗರಾಜ್ ಹಾಗೂ ನವೀನ್ ಎಂಬುವವರು ಈತನ ಜೊತೆ ಗಲಾಟೆ ಮಾಡಿದ್ದರು. ಬಳಿಕ ಯಶವಂತ್ ನನ್ನು ಆಟೋದಲ್ಲಿ ಕೂರಿಸಿಕೊಂಡು ಗೋದಾಮುವೊಂದರಲ್ಲಿ ಕೂಡಿ ಹಾಕಿ, ನಂತರ ಆತನ ಅಣ್ಣನಿಗೆ ಕರೆ ಮಾಡಿಸಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ತಕ್ಷಣ ಈ ವಿಚಾರವನ್ನು ಯಶವಂತ್ ಅಣ್ಣ ಆಲನಹಳ್ಳಿ ಪೊಲೀಸರಿಗೆ ತಿಳಿಸಿದ್ದರು. ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ಒಂದು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ, ಯುವಕನನ್ನು ರಕ್ಷಣೆ ಮಾಡಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.