ಮೈಸೂರು: ವಿಧಾನಸಭೆ ಉಪ ಚುನಾವಣಾ ಕಣ ರಂಗೇರಿದೆ. ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಗೆಲುವು ಸಾಧಿಸಲು ಕಸರತ್ತು ಶುರು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಒಬ್ಬರಿಗೊಬ್ಬರು ಮುಖಾಮುಖಿಯಾಗುವುದು ಕಾಮನ್. ಅದೇ ರಿತಿಯಾಗಿ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಹಾಗೂ ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆರ್.ಧ್ರುವನಾರಾಯಣ್ ಇಂದು ಮುಖಾಮುಖಿಯಾದರು.
ಶಾಸಕ ತನ್ವೀರ್ ಸೇಠ್ ದಾಖಲಾಗಿರುವ ಆಸ್ಪತ್ರೆಯ ಮುಂಭಾಗ ಒಬ್ಬರನ್ನೊಬ್ಬರು ಎದುರಾದಾಗ, ಇಬ್ಬರು ನಗುನಗುತ್ತಲೇ ಮಾತನಾಡಿ, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಹಾಗೂ ಯಾರೂ ಮಿತ್ರರಲ್ಲವೆಂದು ತೋರಿಸಿದರು. ಈ ವೇಳೆ ಧ್ರುವನಾರಾಯಣ್, ನಾನು ನಿಮಗೆ ಪಕ್ಷ ಬಿಡಬೇಡಿ ಎಂದು ಹೇಳಿದ್ದೆ ಎಂದು ವಿಶ್ವನಾಥ್ ಅವರನ್ನು ಕೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಎಲ್ಲಪ್ಪ ಸಿದ್ದರಾಮಯ್ಯ ನಮ್ಮನ್ನ ಉಳಿಯೋಕೆ ಬಿಟ್ಟರೇ ಎಂದು ನಗುನಗುತ್ತಲೇ ಉತ್ತರಿಸಿದರು.