ಮಂಗಳೂರು: ನಗರದ ಕಂಕನಾಡಿಯಲ್ಲಿನ ರಸ್ತೆ ಬದಿಯಲ್ಲಿದ್ದ ಮರವೊಂದನ್ನು ಕಡಿದಿರುವುದಕ್ಕೆ ಸಂಬಂಧಪಟ್ಟಂತೆ ಎಸಿಎಫ್ ವಿರುದ್ಧ ಕದ್ರಿ ಪೊಲೀಸ್ ಸ್ಟೇಷನ್ನಲ್ಲಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ದೂರು ದಾಖಲಿಸಿದೆ.
ಸಾರ್ವಜನಿಕ ಹಿತಾಸಕ್ತಿ ನೆಪವೊಡ್ಡಿ ನಗರದ ಕಂಕನಾಡಿಯ ಸಂತ ಜೋಸೆಫ್ ಶಾಲೆಯ ಬಳಿಯಿರುವ ಮರವನ್ನು ಕಡಿಯಲು ಎಸಿಎಫ್ ಪರವಾನಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಮರಕ್ಕೆ ಕೊಡಲಿ ಹಾಕಲಾಗಿತ್ತು. ಮರವು ಭಾಗಶಃ ಹಾನಿಯಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿರುವ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸದಸ್ಯರು ಮರ ಕಡಿಯುವುದನ್ನು ನಿಲ್ಲಿಸಿದ್ದಾರೆ. ಅಲ್ಲದೆ ಮರ ಕಡಿಯಲು ಅನುಮತಿ ನೀಡಿರುವ ಎಸಿಎಫ್ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.