ಮಂಗಳೂರು: ಜೆಟ್ ಏರ್ ಲಿಮಿಟೆಡ್ ಸಂಸ್ಥೆಯ ಹಿರಿಯ ಅಧಿಕಾರಿ ಹಣ ದುರುಪಯೋಗ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2 ನೇ ಸಿಜೆಎಂ ನ್ಯಾಯಾಲಯ 23 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವರದರಾಯ ನಾಯಕ್ ( 57 ) ಶಿಕ್ಷೆಗೊಳಗಾದವರು ಎಂದು ತಿಳಿದು ಬಂದಿದೆ. ಇವರಿಗೆ ಒಟ್ಟು ಮೂರು ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ನಗರದ ಕೊಡಿಯಾಲ್ ಬೈಲ್ನಲ್ಲಿರುವ ಜೆಟ್ ಏರ್ ಲಿ . ಸಂಸ್ಥೆಯಲ್ಲಿ ಇವರು ಹಿರಿಯ ಅಧಿಕಾರಿಯಾಗಿ 1993 -1999ರವರೆಗೆ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಇವರು ಸಂಸ್ಥೆಯ 18,78,507 ರೂ . ದುರುಪಯೋಗ ಪಡಿಸಿಕೊಂಡಿದ್ದಾಗಿ ಆರೋಪಿಸಿ ಬಂದರು ಪೊಲೀಸ್ ಠಾಣೆಯಲ್ಲಿ 1999 ರ ಮಾ . 3 ರಂದು ಪ್ರತ್ಯೇಕ 6 ಪ್ರಕರಣ ದಾಖಲಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಅವರು ವಿಚಾರಣೆ ನಡೆಸಿ ಆರೋಪಿ ವರದರಾಯ ನಾಯಕ್ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಗೆ ಒಟ್ಟು ಆರು ಪ್ರಕರಣಗಳಲ್ಲಿ ಶಿಕ್ಷೆ ಹಾಗೂ ಒಟ್ಟು 12 ಲಕ್ಷ ರೂ . ದಂಡ ವಿಧಿಸಲಾಗಿದ್ದು, ಪ್ರತಿಯೊಂದು ಪ್ರಕರಣದಲ್ಲಿ ದಂಡದ ಮೊತ್ತ 1.50 ಲಕ್ಷ ರೂ. ಪಾವತಿಯಾದ ಬಳಿಕ, ಒಂಬತ್ತು ಲಕ್ಷ ರೂ ಜೆಟ್ ಏ.ಲಿ . ಸಂಸ್ಥೆಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರ ಎರಡನೇ ಸಿಜೆಎಂ ನ್ಯಾಯಾಲಯದ ಹಿರಿಯ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ ವಾದ ಮಂಡಿಸಿದ್ದರು.
ಓದಿ : ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಂದ ಜೀತ - ಪೋಷಕರ ಆರೋಪ!