ಕಲಬುರಗಿ : 4 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಸರ ಎಗಸಿರಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಬ್ರಹ್ಮಪೂರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವರಾಜ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಮೇ 8ರಂದು ಶರಣನಗರದ ನಿವಾಸಿ ಶಿವಲೀಲಾ ಎಂಬುವರು ತಮ್ಮ ಮಗುವಿನ ಜತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಆಗ ಆರೋಪಿ ಬಸವರಾಜ ದ್ವಿಚಕ್ರ ವಾಹನದಲ್ಲಿ ಬಂದು ಶಿವಲೀಲಾ ಅವರ 4ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರ ದೋಚಿ ಪರಾರಿಯಾಗಿದ್ದ. ಈ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಇದೇ ದೃಶ್ಯವನ್ನ ಆಧರಿಸಿ ಬ್ರಹ್ಮಪೂರ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಅಲ್ಲದೇ ಶಿವಲೀಲಾ ಅವರಿಗೆ ಸರವನ್ನ ವಾಪಸ್ ನೀಡಿದ್ದಾರೆ. ಪೊಲೀಸರ ಈ ಕಾರ್ಯವನ್ನ ಶಿವಲೀಲಾ ಅವರು ಪ್ರಶಂಸಿದ್ದಾರೆ.
ಇದಿಷ್ಟೇ ಅಲ್ಲ, ಕಲಬುರಗಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೇವಲ 6 ತಿಂಗಳಲ್ಲಿಯೇ ಒಂದು ಕೋಟಿ 27 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಂದರೆ ನವೆಂಬರ್ 2021 ರಿಂದ ಏಪ್ರಿಲ್ 2022ರವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 243 ಪ್ರಕರಣ ದಾಖಲಾಗಿದ್ದವು. ಅದರಲ್ಲಿ 61 ಪ್ರಕರಣ ಪತ್ತೆ ಹಚ್ಚಿ ವಾರಸುದಾರರಿಗೆ ಪ್ರಾಪರ್ಟಿ ವಾಪಸ್ ಮಾಡಿದ್ದಾರೆ.
ಇದರಲ್ಲಿ ಒಟ್ಟು 2296 ಗ್ರಾಮ ಚಿನ್ನ, 10150 ಗ್ರಾಂ ಬೆಳ್ಳಿ, ವಸ್ತುಗಳನ್ನು ಸಹ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗೆ ಚಿನ್ನ, ಬೆಳ್ಳಿ, ಬೈಕ್ ಹಾಗೂ ನಗದು ಹಣ ಎಲ್ಲವನ್ನು ವಶಪಡಿಸಿಕೊಂಡು ಒಟ್ಟು ಪ್ರಕರಣಗಳಲ್ಲಿ ಶೇ. 25ರಷ್ಟು ಪ್ರಕರಣಗಳಿಗೆ ಇತ್ಯರ್ಥ ಹಾಡಿದ್ದಾರೆ.
ಇದನ್ನೂ ಓದಿ: ಸತ್ತವನನ್ನೇ ಮರು ಮದುವೆಯಾದ ವಿಧವೆ: ಕಾರಣ ಏನು ಗೊತ್ತಾ?