ಕಲಬುರಗಿ: ಕ್ಷೇತ್ರದ ನೂತನ ಸಂಸದ ಡಾ. ಉಮೇಶ್ ಜಾಧವ್ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.
ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಬಂದಿರುವ ಅನುದಾನದ ಹಾಗೂ ಅದರ ಸದ್ಬಳಕೆ, ಅಕಾಡೆಮಿಕ್ ಚಟುವಟಿಕೆಗಳು ಮತ್ತು ವಿವಿ ಕುಂದುಕೊರತೆಗಳ ಕುರಿತು ಕುಲಪತಿ ಪ್ರೊ. ಹೆಚ್.ಎಂ. ಮಹೇಶ್ವರಯ್ಯ ಅವರಿಂದ ಮಾಹಿತಿ ಪಡೆದ ಸಂಸದರು, ಕೇಂದ್ರ ಸರ್ಕಾರದ ಅನುದಾನವನ್ನು ಇಲ್ಲಿ ಸಮರ್ಪಕವಾಗಿ ವಿನಿಯೋಗಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಸ್ಥಾಪನೆಯಾದಾಗಿನಿಂದ ನೀರಿನ ಸಮಸ್ಯೆ ಎದುರಿಸುತ್ತಿದೆ. 25 ಲಕ್ಷ ಲೀಟರ್ ಸಾಮರ್ಥ್ಯವುಳ್ಳ ನೀರು ಶೇಖರಣೆ ಘಟಕ ವಿವಿ ಕ್ಯಾಂಪಸ್ನಲ್ಲಿ ಸ್ಥಾಪಿಸಲಾಗಿದ್ದು, ಸಮರ್ಪಕ ಕುಡಿಯುವ ನೀರು ಸರಬರಾಜಿಗೆ ಮತ್ತು ಶಾಶ್ವತ ಪರಿಹಾರಕ್ಕೆ ಅಮರ್ಜಾ ಆಣೆಕಟ್ಟಿನಿಂದ ನೀರು ಪೂರೈಕೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮುಂದಿನ ಒಂದು ತಿಂಗಳ ಒಳಗಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಇಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಸಮಾವೇಶ ಏರ್ಪಡಿಸಿ, ಬಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಡಾ. ಜಾಧವ್ ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಮ ಕುಲಪತಿ ಪ್ರೊ. ಜಿ.ಆರ್.ನಾಯಕ್, ಆಳಂದ ಶಾಸಕ ಸುಭಾಷ್ ವಿ. ಗುತ್ತೇದಾರ, ವಾಲ್ಮಿಕಿ ನಾಯಕ್, ವಿಶ್ವನಾಥ ಪಾಟೀಲ್ ಹೆಬ್ಬಾಳ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.