ಹುಬ್ಬಳ್ಳಿ: ಕೊರೊನಾ ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಆತಂಕವನ್ನುಂಟು ಮಾಡಿದೆ. ಇದರಿಂದ ಪೊಲೀಸ್ ಇಲಾಖೆಯೂ ಕೂಡ ಹೊರತಾಗಿಲ್ಲ.
ಹೌದು, ಕೊರೊನಾ ಸಂಕಷ್ಟದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಆತಂಕ ಹಾಗೂ ಭಯದಿಂದ ಆರೋಪಿಗಳನ್ನು ಬಂಧಿಸುವ ಸ್ಥಿತಿ ಇದೆ. ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆಗಳನ್ನು ಮಾಡಬೇಕಾಗಿದೆ. ಹೀಗಾಗಿ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗುತ್ತಿದೆ.
ಯಾವುದೇ ಒಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಕೊರೊನಾ ಇದೆಯೋ, ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಜಾಗರೂಕತೆಯಿಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಇಲ್ಲವಾದ್ರೆ ಸಿಬ್ದಂದಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಆರೋಪಿಗಳನ್ನು ಬಂಧಿಸಿದ ತಕ್ಷಣ ಅವರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಲಾಗುತ್ತದೆ. ಆ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಒಂದು ವೇಳೆ, ಪಾಸಿಟಿವ್ ಬಂದರೆ ಅವರಿಗೆ ಚಿಕಿತ್ಸಾ ವ್ಯವಸ್ಥೆ ಮಾಡಬೇಕಾಗುತ್ತದೆ. ಆದ್ರೆ ಅವಳಿ ನಗರದಲ್ಲಿ ಕೊರೊನಾ ಕರ್ಫ್ಯೂ ಮುಂಚೆ ಹಾಗೂ ಈಗ ಅಪರಾಧ ಪ್ರಕರಣಗಳು ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಪ್ರಕರಣಗಳ ಗಂಭೀರತೆ ಅಧಾರದ ಮೇಲೆ ಪೊಲೀಸರು ಅಪರಾಧಿಗಳಿಗೆ ನೋಟಿಸ್ ಇಲ್ಲದೇ ಬಂಧಿಸಿಯೇ ವಿಚಾರಣೆ ನಡೆಸುವ ಅನಿವಾರ್ಯತೆ ಇದೆ. ಆದ್ರೆ ಅದಕ್ಕೂ ಕೂಡ ಎಲ್ಲಾ ಜಾಗರೂಕತೆ ಕ್ರಮ ಅನುಸರಿಸಲಾಗುತ್ತಿದೆ.
ಆದ್ರೆ ಇಲ್ಲಿಯವರೆಗೂ ಆರೋಪಿಗಳಿಂದ ಯಾವೊಬ್ಬ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿಲ್ಲ. ಅಪರಾಧ ಪ್ರಕರಣಕ್ಕೆ ಸಂಬಂದಿಸಿದಂತೆ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಹಿಂಜರಿಕೆ ಮಾಡಿಲ್ಲ. ತುರ್ತು ಪ್ರಕರಣದಲ್ಲಿ ಆರೋಪಿಗಳು ಹೊರ ರಾಜ್ಯದಲ್ಲಿದ್ದರೂ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ತುರ್ತು ಇಲ್ಲದೆ ಇರುವ ಪ್ರಕರಣದಲ್ಲಿ ಆರೋಪಿಗಳು ಹೊರ ರಾಜ್ಯದಲ್ಲಿದ್ದರೆ ಅಂತಹ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗುತ್ತಿದೆ.
ಕಳೆದ ವರ್ಷ ಕಳ್ಳರೊಬ್ಬನನ್ನು ಹಿಡಿದು ತಂದ ಉಪನಗರ ಠಾಣೆಯ ನಾಲ್ವರು ಪೊಲೀಸರಿಗೆ ಕೊರೊನಾ ದೃಢಪಟ್ಟು, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕ್ವಾರಂಟೈನ್ ಆಗುವಂತಾಗಿತ್ತು.
ಇನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ ಪತ್ನಿ ಕೊಂದ ಕೊಲೆಗಾರನಿಗೂ ಹಾಗೂ ಅಶೋಕನಗರ ಪೊಲೀಸ ಠಾಣೆ ಪೊಲೀಸರು ಬಂಧಿಸಿದ ವಿಧವೆಗೆ ವಂಚಿಸಿದ ಆರೋಪಿಗೆ ಕೊರೊನಾ ಇರೋದು ಧೃಡಪಟ್ಟಿದೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ಇದೀಗ ಕಳ್ಳರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲು ಹಿಂದೇಟು ಹಾಕುವಂತಾಗಿತ್ತು. ಆದ್ರೆ ಇಲ್ಲಿಯವರೆಗೂ ಅಪರಾಧಿಗಳಿಂದ ಕೊರೊನಾ ಸೋಂಕು ದೃಢಪಟ್ಟಿಲ್ಲವಾದ್ರೂ ಪೊಲೀಸ್ ಇಲಾಖೆ ಮಾತ್ರ ಮಾಸ್ಕ್, ಸಾನಿಟೈಸರ್ ಬಳಕೆ ಮಾಡುವುದರ ಜೊತೆಗೆ ಅಪರಾಧಿಗಳ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ಮಾರುಕಟ್ಟೆ ಪ್ರದೇಶಗಳಿಗೆ ಜಗದೀಶ್ ಶೆಟ್ಟರ್ ಭೇಟಿ: ಸಾಮಾಜಿಕ ಅಂತರಕ್ಕೆ ಒತ್ತು ನೀಡುವಂತೆ ಸಲಹೆ