ಬೆಂಗಳೂರು/ಮೈಸೂರು: ಜಗದ್ಗುರು ಶಿವರಾತ್ರೀಶ್ವರ ಮಹಾವಿದ್ಯಾಪೀಠ ಹೊರತಂದಿರುವ 'ಶಿವಪದ ರತ್ನಕೋಶ' ಗ್ರಂಥವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಏಕಕಾಲಕ್ಕೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಆನ್ಲೈನ್ ಮೂಲಕ ಬಿಡುಗಡೆ ಮಾಡಿದರು.

ಕೃತಿ ಲೋಕಾರ್ಪಣೆ ಬಳಿಕ ಮಾತನಾಡಿದ ಸಿಎಂ, ಜನರ ಬದುಕಿನಲ್ಲಿ ಮಠ, ಪೀಠಗಳ ಪಾತ್ರ, ಪ್ರಭಾವ ಅಗಾಧವಾಗಿದೆ. ಇವುಗಳು ಒಂದು ರೀತಿಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಸೃಷ್ಟಿಸಿವೆ. ಈ ಕೈಂಕರ್ಯಗಳಲ್ಲಿ ಸುತ್ತೂರು ಮಠ ಮುಂಚೂಣಿಯಲ್ಲಿದ್ದು, ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಕೊಂಡಾಡಿದರು.

'ಶಿವಪದ ರತ್ನಕೋಶ' ಮಹತ್ವದ ಗ್ರಂಥ. ಇದು ಶೈವಾಗಮನಗಳು, ವಚನ ಸಾಹಿತ್ಯ, ವೀರಶೈವ ಕಾವ್ಯ ಹಾಗು ಅಪರೂಪದ ರೂಢಿ ಪದಗಳನ್ನು ಒಳಗೊಂಡು ನಿಘಂಟಾಗಿ ರೂಪುಗೊಂಡಿದೆ ಎಂದರು.
ಶಿವರಾತ್ರೀಶ್ವರ ಸ್ವಾಮೀಜಿಗಳ ಗೌರವ ಸಂಪಾದಕತ್ವದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರಸ್ವಾಮಿಗಳ ಮಾರ್ಗದರ್ಶನದಲ್ಲಿ ಮೂಡಿರುವ ಈ ಗ್ರಂಥ ಶಿವಧರ್ಮ-ಸಂಸ್ಕೃತಿ, ಸಿದ್ಧಾಂತಗಳನ್ನು ಯಥಾವತ್ತಾಗಿ ಪರಿಚಯಿಸುವ ಸಾವಿರ ಪುಟಗಳ ಬೃಹತ್ ಪದ ಭಂಡಾರವಾಗಿದೆ. ಶಿವರಾತ್ರೀಶ್ವರ ಗ್ರಂಥಮಾಲೆ ಸೇರಿದಂತೆ 300ಕ್ಕೂ ಹೆಚ್ಚು ಮೌಲ್ವಿಕ ಗ್ರಂಥಗಳನ್ನು ಪ್ರಕಟಿಸಿರುವ ಕೀರ್ತಿ ಸಂಸ್ಥೆಗೆ ಸಲ್ಲಲಿದೆ ಎಂದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಜೊತೆಗೆ ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ.ಟಿ.ರವಿ ಇದ್ದರೆ, ಇತ್ತ ಮೈಸೂರಿನಲ್ಲಿ ಜೆಎಸ್ಎಸ್ ಶಾಖಾ ಮಠದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಭಾಂಗಣದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಬಿಡುಗಡೆ ಮಾಡಿದರು.