ಬೆಂಗಳೂರು: ಅನರ್ಹ ಶಾಸಕರು ದೆಹಲಿಗೆ ಪ್ರಯಾಣ ಬೆಳಸಿದ ಬೆನ್ನಲ್ಲೇ, ನೂತನ ಸಚಿವ ಡಾ. ಅಶ್ವತ್ಥನಾರಾಯಣ್ ಕೂಡ ದೆಹಲಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ.
ಹೆಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸೇರಿದಂತೆ ಅನರ್ಹ ಶಾಸಕರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಸುಪ್ರೀಂ ಕೋರ್ಟ್ನಲ್ಲಿನ ಪ್ರಕರಣದ ವಿಚಾರಣೆ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಹೈಕಮಾಂಡ್ ನಾಯಕರು ಅನರ್ಹ ಶಾಸಕರ ಭೇಟಿಗೆ ಒಪ್ಪಿದರೆ, ಅವರನ್ನು ಭೇಟಿ ಮಾಡಿಸಲು ಪೂರಕವಾಗಿ ನೂತನ ಸಚಿವ ಡಾ. ಅಶ್ವತ್ಥನಾರಾಯಣ್ ದೆಹಲಿಗೆ ತೆರಳಲು ಸಿದ್ದರಾಗಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುಮತಿ ನೀಡುತ್ತಿದ್ದಂತೆ, ಅಶ್ವತ್ಥನಾರಾಯಣ್ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.