ಬೆಂಗಳೂರು: ನಗರದಲ್ಲಿ ಮತ್ತೆ ಜಾಹೀರಾತುಗಳು ಕಾಣಿಸಿಕೊಳ್ಳುವ ಸಾಧ್ಯತೆ ಎದ್ದುಕಾಣುತ್ತಿದೆ. ಅದಕ್ಕೆ ಮೊದಲೇ ಎಚ್ಚೆತ್ತುಕೊಂಡ ಮೇಯರ್ ಗೌತಮ್ ಕುಮಾರ್, ಈ ಹೊಸ ನಿಯಮ ಜಾರಿಗೆ ಅವಕಾಶ ಕೊಡಬಾರದೆಂದು ನಗರಾಭಿವೃದ್ಧಿ ಇಲಾಖೆ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
![mayor](https://etvbharatimages.akamaized.net/etvbharat/prod-images/5515753_397_5515753_1577483711640.png)
ನಗರದ ಸೌಂದರ್ಯಕ್ಕೆ ಧಕ್ಕೆಯಾಗುವ ಜಾಹೀರಾತು, ಹೋಲ್ಡಿಂಗ್ಸ್, ಬ್ಯಾನರ್ ಸಂಪೂರ್ಣವಾಗಿ ನಿಷೇಧಿಸಿ, ಬಿಬಿಎಂಪಿ 2018 ರಲ್ಲಿ ನಿಯಮ ಜಾರಿಗೆ ತಂದಿತ್ತು. ಬಿಬಿಎಂಪಿ ತೆಗೆದುಕೊಂಡಿರುವ ನಿರ್ಣಯಕ್ಕೆ ವ್ಯತಿರಿಕ್ತವಾದ ನಿಯಮ ಜಾರಿಗೆ ಬಂದಲ್ಲಿ ಪಾಲಿಕೆಯ ಅಧಿಕಾರಕ್ಕೆ ಧಕ್ಕೆ ತಂದಂತಾಗುತ್ತೆ. ಇದಕ್ಕೆ ವಿರುದ್ಧವಾಗಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಡತ ಮಂಡಿಸಿರುವುದು, ಹೊಸ ಪಾಲಿಕೆ ಜಾಹೀರಾತು ನಿಯಮ-2019 ಅಧಿಸೂಚನೆ ಹೊರಡಿಸಿಲು ಪ್ರಯತ್ನಿಸಿರುವುದು ಕಂಡುಬಂದಿದೆ ಎಂದು ಮೇಯರ್ ಪತ್ರದಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಬಿಬಿಎಂಪಿಯ ‘ಹೊರಾಂಗಣ ಸೈನೇಜ್ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018’ ಜಾಹೀರಾತಿಗೆ ವ್ಯತಿರಿಕ್ತವಾದ ಯಾವುದೇ ನಿಯಮಗಳನ್ನು ರೂಪಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಬೇಕು ಎಂದು ಮೇಯರ್ ಆಗ್ರಹಿಸಿದ್ದಾರೆ.