ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದ ಸಂಚಲನ ಮೂಡಿಸಿದ್ದ ಗೋವಿಂದರಾಜ ಪ್ರಕರಣ ಸಂಬಂಧ ಇಂದಿರಾನಗರ ಪೊಲೀಸರು ದಾಖಲಿಸಿದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
2016ರ ಮಾರ್ಚ್ 15ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆ.ಗೋವಿಂದರಾಜು ಮನೆಯ ಮೇಲೆ ದಾಳಿ ನಡೆಸಿ ಅವರ ಬೆಡ್ರೂಮ್ನಲ್ಲಿದ್ದ ಮಹತ್ವದ ಡೈರಿ ಒಂದನ್ನು ವಶಪಡಿಸಿಕೊಂಡಿದ್ದರು. ಆ ಡೈರಿಯಲ್ಲಿ ಉಲ್ಲೇಖಿಸಲಾಗಿದ್ದ ಅಂಶ ಮತ್ತು ಹೆಸರುಗಳನ್ನು ಆಧರಿಸಿ ಐಟಿ ಅಧಿಕಾರಿಗಳು ಹಲವು ವ್ಯಕ್ತಿಗಳು, ಸಚಿವರನ್ನು ವಿಚಾರಣೆಗೆ ಕರೆಯಿಸಿ ಹೇಳಿಕೆ ಸಹ ಪಡೆದಿದ್ದರು.
ಈ ವಿಚಾರಣೆ ವೇಳೆ 2017ರ ಫೆಬ್ರುವರಿ ತಿಂಗಳಲ್ಲಿ ಡೈರಿಯ ಕೆಲ ಮಾಹಿತಿ ಮಾಧ್ಯಮಗಳ ಮೂಲಕ ಬಹಿರಂಗಗೊಂಡಿತ್ತು. ಈ ಸೋರಿಕೆಯನ್ನು ಐಟಿ ಅಧಿಕಾರಿಗಳು ಮಾಡಿದ್ದಾರೆ ಎಂದು ಗೋವಿಂದರಾಜ್ ಆರೋಪ ಮಾಡಿದ್ದರು. ಅದನ್ನು ಆಧರಿಸಿ ಪೊಲೀಸರು, ಐಟಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ಅನುಸಾರದ ತನಿಖೆಗೆ ಹೈಕೋರ್ಟ್ 2017ರ ಜುಲೈನಲ್ಲಿ ತಡೆ ನೀಡಿತ್ತು.
ಒಟ್ಟಾರೆ ಈ ವಿಚಾರವಾಗಿ ಆದಾಯ ತೆರಿಗೆ (ತನಿಖೆ) ಮಹಾನಿರ್ದೇಶಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, 'ಗೋವಿಂದರಾಜು ನೀಡಿದ್ದ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿರುವುದು ದುರುದ್ದೇಶ ಪೂರ್ವಕವಾಗಿ ಇದ್ದಂತಿದೆ. ಠಾಣಾಧಿಕಾರಿ, ದೂರುದಾರರ ಅಣತಿಯ ಮೇರೆಗೆ ನಡೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಪೊಲೀಸ್ ಠಾಣೆಯ ಅಧಿಕಾರಿ ಅಪರಾಧ ದಂಡ ಸಂಹಿತೆಯ ಕಲಂ 91 ಅನ್ನು ಬಳಸಿ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳಿಗೆ ಸಮನ್ಸ್ ನೀಡಿರುವುದು ಸರಿಯಾದ ಕ್ರಮವಲ್ಲ. ಆದಾಯ ತೆರಿಗೆ ಕಾಯ್ದೆ ಕಲಂ 293ರ ಪ್ರಕಾರ ಸರ್ಕಾರ ಮತ್ತು ಅದರ ಅಧಿಕಾರಿಗಳ ವಿರುದ್ಧ ಯಾವುದೇ ದಾವೆ, ವಿಚಾರಣೆ ಮತ್ತು ಇತರ ಪ್ರಕ್ರಿಯೆಗಳನ್ನು ನಡೆಸಲು ಅವಕಾಶವಿಲ್ಲ' ಎಂದು ನ್ಯಾಯಪೀಠ ಹೇಳಿದೆ.
ಈ ಮೂಲಕ ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ಗೋವಿಂದರಾಜ್ಗೆ ಒಂದು ರೀತಿ ಹಿನ್ನಡೆ ಉಂಟಾಗಿದೆ.
(ಇದನ್ನೂ ಓದಿ: ಪ್ರೇಯಸಿಗಾಗಿ 35 ವರ್ಷ ಕಾದ ಪ್ರಿಯತಮ: 65ನೇ ವಯಸ್ಸಿನಲ್ಲಿ ಸಪ್ತಪದಿ ತುಳಿದ ಸಖತ್ ಜೋಡಿ)