ಬೆಂಗಳೂರು: ಬಿಬಿಎಂಪಿಯ 2021-22 ನೇ ಸಾಲಿನ ಆಯವ್ಯಯಕ್ಕೆ ಸಲಹೆ ಸೂಚನೆಗಳನ್ನು ಪಡೆಯಲು ಮಾಜಿ ಮೇಯರ್ಗಳ ಜೊತೆಗೆ ವಿಶೇಷ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ಸಭೆ ನಡೆಸಿದರು.
ಪಾಲಿಕೆಯ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 2021-22ನೇ ಸಾಲಿನ ಆಯವ್ಯಯ ಮಂಡಿಸಬೇಕಿದೆ. ಪಾಲಿಕೆಗೆ ಬರುವ ಆದಾಯಕ್ಕನುಗುಣವಾಗಿ ಆಯವ್ಯಯ ಮಂಡಿಸಿ ರಸ್ತೆ, ಚರಂಡಿ, ಘನತ್ಯಾಜ್ಯ, ಬೀದಿ ದೀಪ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಗೌರವ್ ಗುಪ್ತಾ ತಿಳಿಸಿದರು.
ಮಾಜಿ ಮೇಯರ್ ಲಕ್ಕಣ್ಣನವರು ಮಾತನಾಡಿ, ಪಾಲಿಕೆಯ ವಿವಿಧ ಮುಂದುವರೆದ ಕಾಮಗಾರಿಗಳಿಗೆ ಮತ್ತು ಕಾಮಗಾರಿಗಳ ಬಾಕಿ ಬಿಲ್ ಮೊತ್ತವನ್ನು ಪಾವತಿಸಲು ಅನುದಾನ ನಿಗದಿ ಮಾಡಿ, ಪಾಲಿಕೆಗೆ ಹೆಚ್ಚುವರಿ ಹೊರೆಯಾಗದಂತೆ ಬಜೆಟ್ ಮಂಡಿಸಲು ಸಲಹೆ ನೀಡಿದರು.
ಹುಚ್ಚಪ್ಪನವರು ಮಾತನಾಡಿ, ಪಾಲಿಕೆಯ ಆಯವ್ಯಯದಲ್ಲಿ ನಿರ್ವಹಣೆ ಕಾಮಗಾರಿಗಳಿಗೆ ಮಾತ್ರ ಒತ್ತು ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ಅತೀ ಅವಶ್ಯಕತೆ ಇದ್ದಲ್ಲಿ ಮಾತ್ರವೇ ಕೈಗೊಳ್ಳುವಂತೆ ಸಲಹೆ ನೀಡಿದರು. ಜೊತೆಗೆ ಸಾರ್ವಜನಿಕರಿಗೆ ಹೆಚ್ಚುವರಿ ತೆರಿಗೆಯನ್ನು ವಿಧಿಸದೇ ಇರುವ ಸಂಪನ್ಮೂಲವನ್ನೇ ಕ್ರೋಢೀಕರಿಸುವಂತೆ ಅಭಿಪ್ರಾಯ ತಿಳಿಸಿದರು.
ಕೆ.ಚಂದ್ರಶೇಖರ್ ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಸುಮಾರು 800 ಚ.ಕಿ.ಮೀ ಇದ್ದು, ಪಾಲಿಕೆಯು ಎಲ್ಲಾ ಪ್ರದೇಶಗಳಿಗೂ ರಸ್ತೆ, ಚರಂಡಿ ಸೌಕರ್ಯ ನೀಡಿದ್ದರೂ ಸಹ ಅಭಿವೃದ್ಧಿ ಶುಲ್ಕ ಮತ್ತು ಸ್ವತ್ತುಗಳ ಎ-ಖಾತೆ ವರ್ಗಾವಣೆ ಮಾಡಿದ್ದಲ್ಲಿ ಸಂಪನ್ಮೂಲ ಕ್ರೋಢೀಕರಣವಾಗುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಿ.ಆರ್.ರಮೇಶ್ ಮಾತನಾಡಿ, ಬೆಂಗಳೂರಿನ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದು ಅವಶ್ಯಕವಾಗಿದ್ದು, ಪ್ರಸಕ್ತ ಆಯವ್ಯಯದಲ್ಲಿ ಈ ಬಗ್ಗೆ ಒತ್ತು ನೀಡುವಂತೆ ಸಲಹೆ ನೀಡಿದರು. ಜೊತೆಗೆ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಪರಿಸರವಾದಿಗಳು ಮತ್ತು ಸ್ವಯಂ ಸೇವಕರುಗಳನ್ನು ಗಣನೆಗೆ ತೆಗೆದುಕೊಂಡರೆ ಉತ್ತಮವಾಗಿ ಕಸ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ಮಂಜುನಾಥ ರೆಡ್ಡಿ ಮಾತನಾಡಿ, ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣ ಪ್ರಮುಖವಾಗಿದ್ದು, ಎ-ಖಾತೆ ಆಗದೇ ಇರುವ ಅನೇಕ ಸ್ವತ್ತುಗಳನ್ನು ಗುರುತಿಸಿ ಎ-ಖಾತೆಗೆ ವರ್ಗಾಯಿಸಲು ಮತ್ತು ಅನಾವಶ್ಯಕ ಕಾಮಗಾರಿಗಳ ಮೇಲೆ ಹಣ ವೆಚ್ಚ ಮಾಡುವುದನ್ನು ತಪ್ಪಿಸಿ, ಅತೀ ಅವಶ್ಯಕ ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಕಾಮಗಾರಿಗಳ ಯೋಜನಾ ವರದಿ ಸಿದ್ಧಪಡಿಸುವಾಗ ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದರು.
ಗಂಗಾಂಬಿಕ ಮಲ್ಲಿಕಾರ್ಜುನ್ ಅವರು ಮಾತನಾಡಿ, ಪಾಲಿಕೆಯಲ್ಲಿ ಸಂಪನ್ಮೂಲ ಸೋರಿಕೆಯಾಗುತ್ತಿರುವ ಬಗ್ಗೆ ಗಮನಹರಿಸಿ, ಒಟ್ಟು ಸ್ಟೇಷನ್ ಸರ್ವೇ ನಡೆಸುವುದು, ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿರುವ ಸ್ವತ್ತುಗಳನ್ನು ಗುರುತಿಸುವುದು, ಎ-ಖಾತೆ ವರ್ಗಿಕರಣ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದರು.
ಸಭೆಯಲ್ಲಿ ವಿಶೇಷ ಆಯುಕ್ತರುಗಳಾದ ತುಳಸಿ ಮದ್ದಿನೇನಿ, ಡಿ.ರಂದೀಪ್, ಬಸವರಾಜು, ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.