ಬೆಂಗಳೂರು : ಯಾವುದೇ ಮಾಲೀಕರು ತನ್ನ ಉದ್ಯೋಗಸ್ಥರನ್ನು ಕರ್ಪ್ಯೂ ಅವಧಿಯಲ್ಲಿ ಕೆಲಸದಿಂದ ವಜಾಗೊಳಿಸದಿರಲು ಹಾಗೂ ಅವರುಗಳ ವೇತನವನ್ನು ಕಡಿತಗೊಳಿಸಬಾರದೆಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಸುತ್ತೋಲೆ ಹೊರಡಿಸಿದ್ದು, ಮನೆ ಮಾಲೀಕರು, ಮನೆಗಳನ್ನು / ಪಿಜಿ / ಅಂಗಡಿಗಳನ್ನು ಬಾಡಿಗೆ ಅಥವಾ ಭೋಗ್ಯದ ಆಧಾರದ ಮೇಲೆ ನೀಡಿರುವ ಬಾಡಿಗೆದಾರರನ್ನು ಸದರಿ ವಾಸದಿಂದ ಬಲವಂತವಾಗಿ ತೆರವುಗೊಳಿಸದಿರಲು ಮನವಿ ಮಾಡಿದ್ದಾರೆ.
ಇಂದಿನಿಂದ ಮೇ 12 ರ ವರೆಗೆ ಕರ್ಪ್ಯೂ ವಿಸ್ತರಿಸಿದ್ದು, ಜನರ ಸಂಚಾರಕ್ಕೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ತೀರ್ಮಾನಿಸಿ ಆದೇಶಿಸಲಾಗಿದೆ. ಕೋವಿಡ್-19 ರ ಪ್ರಕರಣಗಳ ಸಂಖ್ಯೆ ಹಾಗೂ ಕೋವಿಡ್ ಸೋಂಕು ದೃಢಪಡುತ್ತಿರುವ ಪ್ರಮಾಣ ಏರುಗತಿಯಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪ್ರಸರಣದ ಸರಪಳಿಯನ್ನು ತುಂಡರಿಸಲು ಅತ್ಯಂತ ಕಠಿಣ ನಿರ್ಬಂಧ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆ ಕಂಡುಬಂದಿದೆ.
![Government Order](https://etvbharatimages.akamaized.net/etvbharat/prod-images/11573375_etg.jpg)
ಅಲ್ಲದೇ, ಇಂತಹ ದುಃಸ್ಥಿತಿಯಲ್ಲಿ ಹಲವು ಭೂ ಮಾಲೀಕರು / ಮನೆ / ವಸತಿ ಗೃಹ / ಪಿಜಿ / ಅಂಗಡಿ ಮಾಲೀಕರು ಬಾಡಿಗೆ ಮತ್ತು ಭೋಗ್ಯದ ಆಧಾರದ ಮೇಲೆ ನೀಡಿರುವ ಸ್ಥಳಗಳು / ಗೃಹಗಳನ್ನು ಬಾಡಿಗೆದಾರರಿಂದ ತೆರವುಗೊಳಿಸುವ ಕ್ರಮಕ್ಕೆ ಮುಂದಾಗಿದೆ. ಈ ಕರ್ಪ್ಯೂ ಅವಧಿಯಲ್ಲಿ ಉದ್ಯೋಗದಾತರು ತನ್ನ ಉದ್ಯೋಗಸ್ಥರನ್ನು ಕರ್ತವ್ಯದಿಂದ ತೆಗೆದುಹಾಕುತ್ತಿರುವ ಕ್ರಮ ಸರ್ಕಾರದ ಗಮನಕ್ಕೆ ಬಂದಿದೆ.
ಅದೇ ರೀತಿ ಅಂಗಡಿ ಮಾಲೀಕರು ವ್ಯಾಪಾರಕ್ಕಾಗಿ ಬಾಡಿಗೆಗೆ ನೀಡಲಾಗಿರುವ ಅಂಗಡಿ ಮತ್ತು ಅಂತಹುದೇ ಸ್ಥಳಗಳನ್ನು ಬಾಡಿಗೆದಾರರಿಂದ ತೆರವುಗೊಳಿಸಲು ಕ್ರಮವಹಿಸುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕೋವಿಡ್-19 ಸೋಂಕು ನಿರ್ಮೂಲನ ಕ್ರಮದ ಅವಶ್ಯಕತೆಯಿಂದ ವಿಪತ್ತು ನಿರ್ವಹಣಾ ಅಧಿನಿಯಮ 2005 ರ ಪ್ರಕರಣ 24 ರ ಅಡಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷನಾಗಿ ಮನವಿ ಮಾಡುವುದಾಗಿ ಮುಖ್ಯ ಕಾರ್ಯದರ್ಶಿ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.