ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಸಂಪೂರ್ಣ ಸ್ಥಬ್ದಗೊಂಡಿದ್ದ ಟೆಕ್ಸ್ಟೈಲ್ ಉದ್ಯಮವು, ಲಾಕ್ಡೌನ್ ಸಡಿಲಿಕೆ ಬಳಿಕ ವ್ಯಾಪಾರ ವಹಿವಾಟು ಹತೋಟಿಗೆ ಮರಳುವ ವಿಶ್ವಾಸವಿತ್ತು. ರಾಜ್ಯದಲ್ಲಿ ಅದೀಗ ಸ್ಪಲ್ಪಮಟ್ಟಿಗೆ ಸುಧಾರಿಸುತ್ತಿದೆ ಎನ್ನಲಾಗಿದೆ. ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಉದ್ಯಮ ಚೇತರಿಕೆ ಹಾದಿಯತ್ತ ಹೆಜ್ಜೆ ಹಾಕುತ್ತಿದ್ದರೆ, ಬೆಳಗಾವಿಯಲ್ಲಿ ಹಬ್ಬ ಹರಿದಿನಗಳು ಬಂದರೂ ಪುಟಿದೇಳಲು ಒದ್ದಾಡುತ್ತಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹಬ್ಬಗಳ ಸರದಿ ಆರಂಭವಾಗುತ್ತಿದ್ದಂತೆ ಜವಳಿ ಉದ್ಯಮ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ. ಅದರಲ್ಲೂ ಜೀನ್ಸ್ ಉದ್ಯಮಕ್ಕಂತೂ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಜವಳಿ ಹಾಗೂ ಬಟ್ಟೆ ಅಂಗಡಿಗಳನ್ನು ಹೊಂದಿರುವ ನಗರ ಹುಬ್ಬಳ್ಳಿ ಮತ್ತು ಕಡಲ ನಗರಿ ಮಂಗಳೂರಿನಲ್ಲೂ ದೀಪಾವಳಿ ಹಬ್ಬದಿಂದಾಗಿ ಜವಳಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಬಲು ಜೋರಾಗಿದೆ. ಈ ಮೂಲಕ ಲಾಕ್ಡೌನ್ನಿಂದ ಕಂಗೆಟ್ಟಿದ್ದ ಮಾಲೀಕರ ಮೊಗದಲ್ಲಿ ಅನ್ಲಾಕ್ ಮಂದಹಾಸದ ಬೆಳಕು ಹೆಚ್ಚಾಗಿದೆ.
ಬೆಣ್ಣೆನಗರಿ ದಾವಣಗೆರೆಯಲ್ಲಿ ನೆಲಕಚ್ಚಿದ್ದ ಜವಳಿ ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆರ್ಥಿಕತೆಯು ಸಹಜ ಸ್ಥಿತಿಗೆ ಮರಳುವ ಲಕ್ಷಣ ಗೋಚರಿಸುತ್ತಿದೆ. ಇಲ್ಲಿ ಶೇ.70ರಷ್ಟು ಜನರು ರೆಡಿಮೇಡ್ ಬಟ್ಟೆಗಳಿಗೇ ಹೆಚ್ಚಿನ ಒಲವು ತೋರುತ್ತಿದ್ದಾರೆ. ದಸರಾ, ಈದ್ ಮಿಲಾದ್ ಹಬ್ಬಗಳ ವೇಳೆ ಅಂಗಡಿಗಳತ್ತ ಸುಳಿಯದ ಜನರು, ದೀಪಾವಳಿ ಹಬ್ಬಕ್ಕೆ ತಾ ಮುಂದು ನಾ ಮುಂದು ಎನ್ನುತ್ತಿದ್ದಾರೆ. ಇದರಿಂದಾಗಿ ಟೆಕ್ಸ್ಟೈಲ್ಸ್ ಉದ್ಯಮಕ್ಕೆ ಸ್ವಲ್ಪ ಮಟ್ಟಿಗೆ ದೀಪಾವಳಿ ಬೆಳಕು ತಂದಿದೆ. ಈಗ ಚೇತರಿಕೆ ಹಾದಿಯಲ್ಲಿ ಜವಳಿ ಉದ್ಯಮ ಸಾಗುತ್ತಿದ್ದರೂ, ಹಬ್ಬ ಮುಗಿದ ಬಳಿಕ ಇದೇ ವಾತಾವರಣ ಇರುತ್ತದೆ ಎಂಬ ಖಚಿತತೆ ಇಲ್ಲ ಎನ್ನುತ್ತಾರೆ ಕೆಲವರು.
ಬೆಳಗಾವಿಯಲ್ಲಿ ಬಟ್ಟೆ ಖರೀದಿಗೆ ಬರುತ್ತಿದ್ದ ಮಹಾರಾಷ್ಟ್ರ ಹಾಗೂ ಗೋವಾ ಗಡಿ ಭಾಗದ ಜನರು, ಕೊರೊನಾ ಕಾರಣದಿಂದ ನಗರಕ್ಕೆ ಪ್ರಯಾಣ ಬೆಳೆಸಲು ಹಿಂದೇಟು ಹಾಕುತ್ತಿದ್ದಾರೆ. ದಸರಾ ಮುಗಿದಿದ್ದು, ಇದೀಗ ದೀಪಾವಳಿಗೂ ದಿನಗಣನೇ ಆರಂಭವಾಗಿದೆ. ಆದರೆ, ಜನರು ಹೊಸ ಬಟ್ಟೆ ಧರಿಸಿ ಹಬ್ಬವನ್ನು ಸಂಭ್ರಮಿಸುವ ಉತ್ಸಾಹ ತೋರುತ್ತಿಲ್ಲ. ಬೆಳಗಾವಿ ಜಿಲ್ಲಾದ್ಯಂತ 7 ಸಾವಿರಕ್ಕೂ ಅಧಿಕ ಜವಳಿ ಮಳಿಗೆಗಳಿವೆ. ಪ್ರತಿವರ್ಷ ದಸರಾ, ದೀಪಾವಳಿಯಲ್ಲಿ 35 ಕೋಟಿಗೂ ಅಧಿಕ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ, ಈ ವರ್ಷ ಹಬ್ಬದ ವಾತಾವರಣವನ್ನು ಕೊರೊನಾ ಮತ್ತು ಅತಿವೃಷ್ಟಿ ಕಿತ್ತುಕೊಂಡಿವೆ.
ಅನ್ಲಾಕ್ ನಂತರ ಶುಭ-ಸಮಾರಂಭಗಳು, ಹಬ್ಬ ಹರಿದಿನ, ಜಾತ್ರೆಗಳು ಹೆಚ್ಚಾಗಿದ್ದು, ಬಟ್ಟೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಖರೀದಿಯಲ್ಲಿ ಮುಂದಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಬಟ್ಟೆಗಳ ಪೂರೈಕೆಯಾಗುತ್ತಿಲ್ಲ ಎಂಬ ಕೊರಗು ಮಾಲೀಕರದ್ದಾಗಿದೆ. ಇನ್ನು ಸೀರೆಗಳನ್ನು ಖರೀದಿಸಿ ನೇಕಾರರ ನೆರವಿಗೆ ನಿಲ್ಲುವುದಾಗಿ ಹೇಳಿದ್ದ ಸರ್ಕಾರ ಕೂಡ ಮೌನಕ್ಕೆ ಶರಣಾಗಿದ್ದು, ನೇಕಾರರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಾಲಮಾಡಿ ವಿದ್ಯುತ್ ಮಗ್ಗ ಖರೀದಿಸಿದ್ದ 6 ಕ್ಕೂ ಅಧಿಕ ನೇಕಾರರು ನೇಯ್ದ ಸೀರೆಗಳು, ವ್ಯಾಪಾರವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈವರೆಗೂ ಅವರ ನೆರವಿಗೆ ಸರ್ಕಾರ ಬಂದಲ್ಲ. ಕೂಡಲೇ ನೇಕಾರರ ಬದುಕನ್ನು ಹಸನಾಗಿಸಲು ಸರ್ಕಾರ ಮುಂದಾಗಬೇಕಿದೆ.